“ಸುಪ್ತ ಪ್ರತಿಭೆ ಬೆಳಗಲು ಶಿಬಿರ ಸಹಕಾರಿ’
"ಖಮಿರ್' ರಜಾ ಶಿಬಿರ ಉದ್ಘಾಟನೆ
Team Udayavani, Apr 28, 2019, 6:00 AM IST
ಮಹಾನಗರ: ಶಿಬಿರಗಳು ನಮ್ಮೊಳಗಿರುವ ಸುಪ್ತ ಪ್ರತಿಭೆಗಳನ್ನು ಬೆಳಗಲು ಸಹಕಾರಿ. ಆದರೆ ಹೊಸತನಕ್ಕೆ ತೆರೆದುಕೊಳ್ಳುವ ಮತ್ತು ದೊರೆತ ಅವಕಾಶವನ್ನು ಸದುಪಯೋಗಪಡಿಸುವ ಮನಸ್ಸು ಇರಬೇಕು ಎಂದು ಗಾಯಕಿ ಹೆರಾ ಪಿಂಟೋ ಹೇಳಿದರು.
ನಗರದ ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ವತಿಯಿಂದ ಶನಿವಾರ ಆಯೋಜಿಸಿದ್ದ “ಖಮಿರ್’ ಮಕ್ಕಳ ರಜಾ ಶಿಬಿರವನ್ನು ಹಿಟ್ಟಿಗೆ ಹುದುಗು ಕಿಣ್ವವನ್ನು ಬೆರೆಸಿ ಉದ್ಘಾಟಿಸಿದರು.
ವಿವಿಧ ವಿಭಾಗಗಳ ತರಬೇತು ದಾರರಾದ ರಾಹುಲ್ ಪಿಂಟೋ, ವೆಲನಿ ಗೋವಿಯಸ್, ಶ್ರವಣ್ ಬಾಳಿಗಾ, ಜೇಸನ್, ಡಿಯಾಲ್ ಆಶೆಲ್ ಡಿ’ಸಿಲ್ವಾ ಮತ್ತು ವಿಕ್ಟರ್ ಮತಾಯಸ್ ಅವರನ್ನು ಗೌರವಿಸಿದರು.
ಮೇ 5: ಪ್ರದರ್ಶನ
ಈ ಶಿಬಿರದಲ್ಲಿ ಮಕ್ಕಳಿಗೆ ಆಯ್ಕೆ ಮಾಡಿದ ತಲಾ ಗಾಯನ, ನೃತ್ಯ ಮತ್ತು ನಾಟಕ ವಿಭಾಗಗಳಲ್ಲಿ ಹಾಗೂ ಎಲ್ಲರಿಗೂ ಕೊಂಕಣಿ ಭಾಷೆಯಲ್ಲಿ ತರಬೇತಿ ದೊರೆಯಲಿದೆ. ಮೇ 5ರಂದು ನಡೆಯುವ 209ನೇ ತಿಂಗಳ ವೇದಿಕೆ ಯಲ್ಲಿ ಈ ಶಿಬಿರಾರ್ಥಿಗಳ ಪ್ರದರ್ಶನ ನಡೆಯಲಿದೆ. ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೋ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಐರಿನ್ ರೆಬೆಲ್ಲೊ ನಿರೂಪಿಸಿ, ವಂದಿಸಿದರು.