ಪದವೀಧರ ಯಕ್ಷಗಾನ ಸಮಿತಿ: ತರಬೇತಿಗೆ ಉತ್ತಮ ಸ್ಪಂದನೆ
Team Udayavani, Apr 28, 2019, 4:38 PM IST
ಮುಂಬಯಿ: ಪದವೀಧರ ಯಕ್ಷಗಾನ ಸಮಿತಿಯ ವತಿಯಿಂದ ನವಿಮುಂಬಯಿ ಕನ್ನಡ ಸಂಘ ವಾಶಿ ಇದರ ಸಹಯೋಗದೊಂದಿಗೆ ಇತ್ತೀಚೆಗೆ ಪ್ರಾರಂಭಿಸಿದ ಉಚಿತ ಯಕ್ಷಗಾನ ತರಬೇತಿ ಶಿಬಿರಕ್ಕೆ ಒಳ್ಳೆಯ ಸ್ಪಂದನೆ ಲಭಿಸಿದೆ.
ಶಿಬಿರದಲ್ಲಿ ಮಕ್ಕಳು, ಯುವಕ-ಯುವತಿಯರು, ಹಿರಿಯರು ಸೇರಿದಂತೆ ಸುಮಾರು 45ಕ್ಕೂ ಅಧಿಕ ಮಂದಿ ಪಾಲ್ಗೊಂಡಿರುವುದು ಅಭಿಮಾನದ ಸಂಗತಿಯಾಗಿದೆ. ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಅವರು ಸ್ವತಃ ಯಕ್ಷಗಾನದ ಸಂಗೀತ, ನೃತ್ಯ, ಅರ್ಥಗಾರಿಕೆ, ಮುಖವರ್ಣಿಕೆ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಅಲ್ಲದೆ ಭಾಗವತರಾದ ಜಯಪ್ರಕಾಶ್ ನಿಡ್ವಣ್ಣಾಯ ಅವರು ಭಾಗವತಿಕೆ, ಚೆಂಡೆ-ಮದ್ದಳೆಯ ತರಬೇತಿ ನೀಡಿದರೆ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ವಾಸುದೇವ ಮಾರ್ನಾಡ್ ಅವರು ಯಕ್ಷಗಾನ ಹೆಜ್ಜೆಗಾರಿಕೆಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ವಿದುಷಿ ಸಹನಾ ಭಾರದ್ವಾಜ್, ಸಂದೀಪ್ ಕುಮಾರ್, ಎಸ್. ಕೆ. ಸುಂದರ್ ಅವರು ಹಿನ್ನಲೆಯಲ್ಲಿ ಸಹಕರಿಸುತ್ತಿದ್ದಾರೆ.