ಮೆಕ್ಕಾ ಯಾತ್ರೆಗೆ ಅನುಮತಿ ಕೋರಿ ನಲಪಾಡ್ ಅರ್ಜಿ
Team Udayavani, May 4, 2019, 3:02 AM IST
ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜಾಮೀನು ಪಡೆದಿರುವ, ಮೊಹಮ್ಮದ್ ನಲಪಾಡ್ ತನಗೆ ಮೆಕ್ಕಾ ಯಾತ್ರೆಗೆ ತೆರಳಲು ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತಂತೆ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ಸಲ್ಲಿಸಿರುವ ಅರ್ಜಿ ನ್ಯಾ. ಕೆ.ಎಸ್. ಮುದಗಲ್ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ತಮ್ಮ ಕಕ್ಷಿದಾರರಿಗೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ಕೊಟ್ಟಿದೆ. ಈಗ ಅವರು ಮೆಕ್ಕಾ ಯಾತ್ರೆಗೆ ತೆರಳಬೇಕಾಗಿದ್ದು, ಜಾಮೀನು ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅಲ್ಲದೇ ಜಾಮೀನು ಷರತ್ತುಗಳನ್ನು ಸಡಿಲಗೊಳಿಸಲು ವಿಶೇಷ ಸರ್ಕಾರಿ ಅಭಿಯೋಜಕರಿಗೂ (ಎಸ್ಪಿಪಿ) ಯಾವುದೇ ಆಕ್ಷೇಪವಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ಅಲ್ಲೇ ಇದ್ದ ಎಸ್ಪಿಪಿ ಶ್ಯಾಮ್ಸುಂದರ್, ಪವಿತ್ರ ಮೆಕ್ಕಾ ಯಾತ್ರೆಗೆ ತೆರಳುತ್ತಿರುವುದರಿಂದ ಜಾಮೀನು ಶರತ್ತುಗಳನ್ನು ಸಡಿಲಿಸುವ ವಿಚಾರದಲ್ಲಿ ತಾನು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅಷ್ಟಕ್ಕೂ ಜಾಮೀನು ಶರತ್ತು ಸಡಿಲಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.
ಆಗ ನಿಮ್ಮ ಕಕ್ಷಿದಾರ ಯಾವಾಗ ಮೆಕ್ಕಾ ಯಾತ್ರೆಗೆ ತೆರಳಬೇಕಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಮೇ 4ರಂದು ಎಂದು ವಕೀಲರು ಉತ್ತರಿಸಿದರು.
ಅರ್ಜಿ ಪರಿಶೀಲನೆ ವೇಳೆ ಮೇ 2ರಂದು ಮೆಕ್ಕಾಗೆ ಹೋಗಬೇಕು ಎಂದು ಇರುವುದನ್ನು ಗಮನಿಸಿ, “ನೀವು ಇಲ್ಲಿ ನಾಳೆ (ಮೇ 4) ಎಂದು ಹೇಳುತ್ತಿದ್ದೀರಿ. ಆದರೆ, ಅರ್ಜಿಯಲ್ಲಿ ಮೇ 2 ಎಂದಿದೆಯಲ್ಲಾ’ ಎಂದು ಪ್ರಶ್ನಿಸಿದ ನ್ಯಾಯಪೀಠ, ಅಷ್ಟಕ್ಕೂ ಈಗ ಕಲಾಪದ ಅವಧಿ ಮುಗಿದಿದೆ ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ಗೆ ಶರತ್ತುಬದ್ಧ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯ ದೇಶ ಬಿಟ್ಟು ತೆರಳದಂತೆ ಶರತ್ತು ವಿಧಿಸಿತ್ತು.