ಪಾಂಡೇಶ್ವರದ ಪೊಲೀಸ್ಲೇನ್ನಲ್ಲಿ ಸ್ವಚ್ಛತಾ ಶ್ರಮದಾನ
ರಾಮಕೃಷ್ಣ ಮಿಷನ್ ಸ್ವತ್ಛ ಮಂಗಳೂರು ಅಭಿಯಾನ
Team Udayavani, May 7, 2019, 6:21 AM IST
ಮಹಾನಗರ: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛತಾ ಅಭಿಯಾ ನದ 5ನೇ ವರ್ಷದ 22ನೇ ರವಿವಾರದ ಶ್ರಮದಾನ ಮೇ 5ರಂದು ಪಾಂಡೇಶ್ವರದ ಪೊಲೀಸ್ಲೇನ್ನಲ್ಲಿ ನಡೆಯಿತು.
ನೂತನವಾಗಿ ಲೋಕಾರ್ಪಣೆಗೊಂಡ ಪೊಲೀಸ್ ಲೇನ್ ಮಕ್ಕಳ ಪಾರ್ಕ್ ಎದುರಿಗೆ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾ ಮಾನಂದಜಿ ಉಪಸ್ಥಿತಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ, ಮನಪಾ ಮಾಜಿ ಸದಸ್ಯ ದಿವಾಕರ್ ಪಾಂಡೇಶ್ವರ ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಲಕ್ಷ್ಮೀಪ್ರಸಾದ್, ಕ್ಯಾ| ಗಣೇಶ್ ಕಾರ್ಣಿಕ್, ಡಾ| ಜೀವರಾಜ್ ಸೊರಕೆ, ಡಾ| ಧನೇಶ್ ಕುಮಾರ್, ಗುರುದತ್ತ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಚಾಲನೆ ನೀಡಿದ ಬಳಿಕ ಸ್ವಾಮಿಜಿ ಅವರು, ಗಣ್ಯರು ಪೊರಕೆ ಹಿಡಿದು ಕೆಲಕಾಲ ಸ್ವಚ್ಛತೆ ಮಾಡಿದರು. ಅನಂತರ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಮಾರ್ಗದರ್ಶನದಂತೆ ಆರು ತಂಡಗಳನ್ನು ರಚಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು. ಮೊದಲ ತಂಡ ಮಕ್ಕಳ ಪಾರ್ಕ್ ಬದಿಯ ಜಾಗೆಯಲ್ಲಿದ್ದ ಒಂದು ಟಿಪ್ಪರನಷ್ಟು ಕಸ, ಎಲೆ, ಕಲ್ಲು ಮಣ್ಣುಗಳ ರಾಶಿಯನ್ನು ತೆಗೆದು ಶುಚಿಗೊಳಿಸಿದರು.
ಮಧುಚಂದ್ರ ಅಡ್ಯಂತಾಯ, ಪ್ರವೀಣ ಶೆಟ್ಟಿ, ಹಿರಿಯ ಸ್ವಯಂ ಸೇವಕರು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಿದರು. ಎರ ಡನೇ ತಂಡ ದಿಲ್ರಾಜ್ ಆಳ್ವ ನೇತೃ ತ್ವದಲ್ಲಿ ಶ್ರೀದೇವಿ ದೇವಸ್ಥಾನದ ಮುಂಭಾಗದಲ್ಲಿದ್ದ ಕಲ್ಲು-ಮಣ್ಣುಗಳ ರಾಶಿಯನ್ನು ತೆರವು ಮಾಡಿ, ನೆಲವನ್ನು ಸಮತಟ್ಟುಗೊಳಿಸಲಾಯಿತು. ಮತ್ತೂಂದು ತಂಡದಲ್ಲಿದ್ದ ರವಿ ಕೆ.ಆರ್., ಹಿಮ್ಮತ್ ಸಿಂಗ್, ಕಾರ್ಯಕರ್ತರು ಅದೇ ರಸ್ತೆಯಲ್ಲಿದ್ದ ಬಾವಿಯ ಸುತ್ತಮುತ್ತಲಿನ ಕಟ್ಟಡ ತ್ಯಾಜ್ಯ ಸಹಿತ ಕಲ್ಲುಗಳನ್ನು ತೆಗೆದು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟರು.
ಜಾಗ ಸಮತಟ್ಟು
ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯ ಸಿಬಂದಿ ಮುಖ್ಯ ರಸ್ತೆ ಮತ್ತು ತೋಡುಗಳನ್ನು ಶುಚಿಗೊಳಿಸಿದರು. ಇನ್ನೊಂದು ತಂಡದಲ್ಲಿದ್ದ ಸುಧೀರ್, ಯೋಗೀಶ್ ಕಾಯರ್ತಡ್ಕ, ಕಾರ್ಯ ಕರ್ತರು ತ್ಯಾಜ್ಯರಾಶಿ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಲಾರಿಗೆ ತುಂಬಿಸಿ ಜಾಗವನ್ನು ಸಮತಟ್ಟುಗೊಳಿಸಿದರು. ಇದೀಗ ಅಲ್ಲಿ ಆಲಂಕಾರಿಕ ಗಿಡಗಳನ್ನಿಡಲಾಗಿದೆ. ಇಂದಿನಿಂದ ಸ್ವಚ್ಛತಾ ಯೋಧರ ಕಣ್ಗಾವಲು ಪಡೆ ಪೊಲೀಸ್ ಲೇನ್ನಲ್ಲಿ ಪ್ರತಿನಿತ್ಯ ಕಾವಲು ಕಾಯಲಿದೆ. ಅಕಸ್ಮಾತ್ ಯಾರಾದರೂ ಕಸ ಹಾಕಿದರೆ ಅವರಿಗೆ ತಿಳಿಹೇಳಿ, ರಸ್ತೆಗೆ ಕಸ ಹಾಕದಂತೆ ಮನವೊಲಿಸುವ ಕಾರ್ಯ ಮಾಡಲಿದೆ.
ಮಾರ್ಗಸೂಚಕ ಫಲಕಗಳ ನವೀಕರಣ
ಪಾಂಡೇಶ್ವರದಲ್ಲಿರುವ 3 ಮಾರ್ಗಸೂಚಕ ಫಲಕಗಳನ್ನಿಂದು ನವೀಕರಿಸಲಾಯಿತು. ಬಿ.ಆರ್. ಕರ್ಕೇರಾ ರಸ್ತೆ ಅನ್ನುವ ಹೆಸರಿನ ಎರಡು, ಡಾ| ಎಂ.ವಿ. ಶೆಟ್ಟಿ ರಸ್ತೆ ಎಂಬ ಫಲಕಗಳನ್ನು ತೊಳೆದು ಶುಚಿಗೊಳಿಸಿ, ಹಳದಿ ಕಪ್ಪು ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಣಗೊಳಿ ಸಲಾಗಿದೆ. ಶ್ರೀದೇವಿ ಆರ್ಟ್ಸ್ ಕರ್ಣ, ಆನಂದ ಅಡ್ಯಾರ್ ಈ ಕಾರ್ಯದಲ್ಲಿ ಸಹಕಾರ ನೀಡಿದರು.
ಜಾಗೃತಿ ಕಾರ್ಯ
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿಯರು ಅಭಿಷೇಕ ವಿ.ಎಸ್. ಜತೆಗೂಡಿ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಅಂಗಡಿಯ ವರ್ತಕರಿಗೂ ತಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಮನವಿ ಮಾಡಲಾಯಿತು. ಸುರೇಶ್ ಶೆಟ್ಟಿ ಮಲೇ ರಿಯಾ, ಡೆಂಗ್ಯೂ ಕುರಿತು ಜನರಿಗೆ ಮಾಹಿತಿ ನೀಡಿದರು. ಸ್ವತ್ಛ ಮಂಗಳೂರು ಕನಸಲ್ಲ ಸುಮಾರು 200 ಕೈಪಿಡಿಗಳನ್ನು ಹಂಚಲಾಯಿತು.ಈ ಕಾರ್ಯದಲ್ಲಿ ಸಹಕಾರ ನೀಡಿದರು.