ಚೌಕೀದಾರ್ ಚೋರ್ ಹೈ: ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ಗಾಂಧಿ ನಿಶ್ಶರ್ತ ಕ್ಷಮೆಯಾಚನೆ
Team Udayavani, May 8, 2019, 12:23 PM IST
ಹೊಸದಿಲ್ಲಿ : ರಫೇಲ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಚೌಕೀದಾರ್ ಚೋರ್ ಹೈ ಎಂದು ಹೇಳಿದೆ ಎಂಬುದಾಗಿ ತಾನು ತಪ್ಪಾಗಿ ಹೇಳಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಬುಧವಾರ ಸುಪ್ರೀಂ ಕೋರ್ಟಿನಲ್ಲಿ ನಿಶ್ಶರ್ತ ಕ್ಷಮೆ ಯಾಚಿಸಿದರು.
ಮಾತ್ರವಲ್ಲದೆ ತನ್ನ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ದಾಖಲಿಸಿರುವ ಕೋರ್ಟ್ ನಿಂದನೆಯ ಕ್ರಿಮಿನಲ್ ಪ್ರಕರಣವನ್ನು ಕೊನೆಗೊಳಿಸಬೇಕೆಂದೂ ರಾಹುಲ್ ಕೋರಿದರು.
ಸುಪ್ರೀಂ ಕೋರ್ಟಿಗೆ ಇಂದು ರಾಹುಲ್ ಗಾಂಧಿ ಸಲ್ಲಿಸಿದ ಮೂರು ಪುಟಗಳ ಹೊಸ ಅಫಿದಾವಿತ್ನಲ್ಲಿ “ಸುಪ್ರೀಂ ಕೋರ್ಟ್ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ; ನ್ಯಾಯದಾನ ಪ್ರಕ್ರಿಯೆಯಲ್ಲಿ ತಾನು ಈ ತನಕ ಎಂದು ಕೂಡ ಹಸ್ತಕ್ಷೇಪ ನಡೆಸಿದ್ದಿಲ್ಲ’ ಎಂದು ಹೇಳಿದ್ದಾರೆ.
“ರಫೇಲ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚೌಕೀದಾರ್ ಚೋರ್ ಹೈ ಎಂದು ಹೇಳಿದೆ ಎಂಬುದಾಗಿ ನಾನು ತಪ್ಪಾಗಿ ಹೇಳಿರುವುದಕ್ಕೆ ಉನ್ನತ ನ್ಯಾಯ ಪೀಠದ ಮುಂದೆ ಕ್ಷಮೆ ಕೋರುತ್ತೇನೆ’ ಎಂದು ರಾಹುಲ್ ಗಾಂಧಿ ಅಫಿದಾವಿತ್ ನಲ್ಲಿ ಹೇಳಿದ್ದಾರೆ.