ನಗರದ ವಿವಿಧೆಡೆ ತ್ಯಾಜ್ಯ ನಿರ್ವಹಣೆ ಮಾಹಿತಿ ಶಿಬಿರ
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನಸಂಪರ್ಕ ಅಭಿಯಾನ
Team Udayavani, May 9, 2019, 6:11 AM IST
ಸಾಂದರ್ಭಿಕ ಚಿತ್ರ.
ಮಹಾನಗರ: ರಾಮಕೃಷ್ಣ ಮಿಷನ್ ಮಾರ್ಗದರ್ಶನದಡಿ ಆಯೋ ಜನೆ ಮಾಡಲಾಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು ಎಪ್ರಿಲ್ ತಿಂಗಳಲ್ಲಿ ನಗರದ ಹಲವೆಡೆ ಹಮ್ಮಿಕೊಳ್ಳಲಾಯಿತು.
ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪ್ರತಿನಿತ್ಯ ನಡೆಯುವ ಜನ ಸಂಪರ್ಕ ಅಭಿಯಾನದ 107ನೇ ಕಾರ್ಯ ಕ್ರಮವನ್ನು ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಸಿ| ಜಸಿಂತಾ ಡಿ’ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಾಮಾ ಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ ಸ್ವಚ್ಛತೆ, ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾತನಾಡಿದರು. ನಲ್ಲೂರ ಸಚಿನ ಶೆಟ್ಟಿ ಮಡಕೆ ಗೊಬ್ಬರವನ್ನು ತಯಾರಿಸುವ ಬಗ್ಗೆ ತಿಳಿಸಿದರು. ಸಿಜಿ ಪಿ.ಕೆ. ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಕಾರ್ಪೊರೇಶನ್ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಒಕ್ಕೂಟ ಮತ್ತು ಕಾರ್ಯನಿರತ ಅಧಿಕಾರಿಗಳ ಒಕ್ಕೂಟದ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 108ನೇ ಕಾರ್ಯಕ್ರಮವನ್ನು ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ರಾಜಬೋಸ್, ಸುಕುಮಾರ ಸಾಲ್ಯಾನ್, ಪ್ರಕಾಶ ಸತೀಶ್ ಶೆಟ್ಟಿ ಇನ್ನಿತರ ಅಧಿಕಾರಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಲ್ಲೂರ ಸಚಿನ್ ಶೆಟ್ಟಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಮಲಾಕ್ಷ ಪೈ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
ತ್ಯಾಜ್ಯ ನಿರ್ವಹಣೆ ಜಾಗೃತಿ
ಕೋಡಿಯಾಲ್ ಗುತ್ತು ದತ್ತ ಪ್ಯಾಲೇಸ್ ಅಪಾರ್ಟ್ಮೆಂಟ್ ನಿವಾಸಿ ಗಳಿಗಾಗಿ ಹಸಿತ್ಯಾಜ್ಯ ಒಣತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ಜಾಗೃತಿ ಕುರಿತ 109ನೇ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.
ನಿವೃತ್ತ ಪ್ರಾಚಾರ್ಯ ಡಾ| ದೇವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಮಕೃಷ್ಣ ಮಿಷನ್ ವತಿಯಿಂದ ಹೊರತರಲಾದ ನೂತನ ಬಟ್ಟೆ ಚೀಲಗಳನ್ನು ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ದರು. ಸುಂದರಾ, ಅನಂತರಾಮ್ ಹೆಗ್ಡೆ, ಪುನೀತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಚ್ಛತೆಯ ಅರಿವು ಕಾರ್ಯಕ್ರಮ
ಮಡಕೆ ಗೊಬ್ಬರದ ಪ್ರಾತ್ಯಕ್ಷಿಕೆ, ಸ್ವತ್ಛತೆಯ ಅರಿವು ಮೂಡಿಸುವ ಸಲುವಾಗಿ ಮೋರ್ಗನ್ಸ್ ಗೇಟ್ನಲಿರುವ ಪಿ.ಎಲ್. ಕಾಲನಿಯಲ್ಲಿ ಕಾರ್ಯಕ್ರಮವನ್ನು ವ್ಯವಸ್ಥೆ ಗೊಳಿಸಲಾಗಿತ್ತು. ಮಾಜಿ ಮನಪಾ ಸದಸ್ಯ ಸುರೇಶ್ ಶೆಟ್ಟಿ “ಶುಚಿತ್ವ: ನಮ್ಮ ಕರ್ತವ್ಯಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ಸ್ವಯಂ ಸೇವಕ ಸಚಿನ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪುನೀತ್ ಪೂಜಾರಿ 110ನೇ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.
ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ, ಕೃಷಿ ತರಬೇತಿ ಕೇಂದ್ರ ಸುರತ್ಕಲ್ ಆಶ್ರಯದಲ್ಲಿ 113ನೇ ಸ್ವತ್ಛತಾ ಜನ ಸಂಪರ್ಕ ಅಭಿಯಾನವನ್ನು ವಿರಾಟ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಡಾ| ರಾಜಮೋಹನ್ ರಾವ್ ಪ್ರಾಸ್ತಾ ವಿಸಿ, ಸ್ವಾಗತಿಸಿದರು. ನಮ್ಮ ಕಸ ನಮ್ಮ ಹೊಣೆ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಸತೀಶ್ ಸದಾನಂದ ಮಾತನಾಡಿದರು. ವಿರಾಟ್ ನಿರ್ದೇಶಕ ಬಾಲಕೃಷ್ಣ ಎಚ್., ಪ್ರೊ| ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ ಮಾಹಿತಿ ಶಿಬಿರ
ಕುಲಶೇಖರದ ದ.ಕ. ಕರ್ನಾಟಕ ಹಾಲು ಉತ್ಪಾದಕರ ಸಂಘದ ಸಭಾ ಭವನದಲ್ಲಿ ಕೆಎಂಎಫ್ ಸಿಬಂದಿಗಾಗಿ ಸ್ವಚ್ಛ ತಾ ಜನ ಸಂಪರ್ಕ ಅಭಿಯಾನದ 115ನೇ ಸ್ವಚ್ಛ ಭಾರತ ಮಾಹಿತಿ ಶಿಬಿರ ನಡೆಯಿತು. ಉಮಾನಾಥ್ ಕೋಟೆಕಾರ್ ಸಂಪನ್ಮೂಲ ವ್ಯಕ್ತಿಯಾಗಿ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಿದರು. ಕೆಎಂಎಫ್ ಮಾರುಕಟ್ಟೆ ಮುಖ್ಯಸ್ಥ ಜಯದೇವಪ್ಪ ಕೆ. ಸಂಯೋಜನೆ ಮಾಡಿದರು.
ಸುರತ್ಕಲ್ ವಿದ್ಯಾದಾಯಿನಿ ಗ್ರಾಮೀಣಾಭಿವೃದ್ಧಿ, ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿರಾಟ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ ಸದಸ್ಯರಿಗಾಗಿ ಹಸಿಕಸವನ್ನು ಮಡಕೆಯಲ್ಲಿ ಹಾಕಿ ಗೊಬ್ಬರ ಮಾಡುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಅಧ್ಯಕ್ಷ ದೇವದಾಸ್, ಪ್ರೊ| ರಾಜಮೋಹನ್ ರಾವ್, ಚಕ್ರೇಶ್ ಅಮೀನ್ ಇನ್ನಿತರರು ಉಪ ಸ್ಥಿ ತರಿದ್ದರು. ಸತೀಶ್ ಸದಾನಂದ 116ನೇ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಎಂಆರ್ಪಿಎಲ್ ಸಂಸ್ಥೆ ಈ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ಸ್ವಚ್ಛತೆಯ ಅರಿವು
ಸ್ವಾಮಿ ವಿವೇಕಾನಂದ ಯೋಗ ಮಂದಿರದಲ್ಲಿ ಯೋಗ ಶಿಬಿರಾರ್ಥಿಗಳಿಗೆ ಸ್ವಚ್ಛತೆಯ ಅರಿವು ನೀಡುವ ಕಾರ್ಯಕ್ರಮವನ್ನು ಯೋಗಶಿಕ್ಷಕ ಜಗದೀಶ್ ಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಸ್ವಚ್ಛತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ಸಚಿನ್ ಶೆಟ್ಟಿ ಮಾತನಾಡಿದರು. 111ನೇ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಬಟ್ಟೆ ಕೈಚೀಲಗಳನ್ನು ಉಚಿತವಾಗಿ ವಿತರಿಸಲಾಯಿತು.
ಮಡಕೆ ಗೊಬ್ಬರ ತಯಾರಿಕೆ ಮಾಹಿತಿ
ಬೆಂದೂರ್ವೆಲ್ ಪ್ರದೇಶದಲ್ಲಿರುವ ಎಸ್ಸಿಎಸ್ ಆಸ್ಪತ್ರೆಯಲ್ಲಿರುವ ಶುಶ್ರೂಷಕಿಯರಿಗಾಗಿ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತೆಯ ಕುರಿತಂತೆ 114ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ಜನಸಂಪರ್ಕ ಅಭಿಯಾನದ ಪ್ರಯುಕ್ತ ಮಡಕೆ ಗೊಬ್ಬರ ತಯಾರಿಕಾ ವಿಧಾನದ ಬಗ್ಗೆ ತಿಳಿಸಿಕೊಡಲಾಯಿತು. ಸಚಿನ್ ಶೆಟ್ಟಿ ಪ್ರಾತ್ಯಕ್ಷಿಕೆ ನೀಡಿ ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದರು. ಜಾನ್ ಮೊಂತೆರೋ ಸ್ವಾಗತಿಸಿದರು. ಆಡಳಿತಾಧಿಕಾರಿ ರಮಾ ಸೊರಕೆ ಸಂಯೋಜನೆ ಮಾಡಿದರು.