ಸುಬ್ರಹ್ಮಣ್ಯ ಸಮೀಪ ಗಾಯಗೊಂಡ ಕಾಡಾನೆ ಪತ್ತೆ
Team Udayavani, May 9, 2019, 3:00 AM IST
ಸುಬ್ರಹ್ಮಣ್ಯ: ಪಶ್ಚಿಮಘಟ್ಟ ಸಾಲಿನಲ್ಲಿ ಬರುವ ಸುಬ್ರಹ್ಮಣ್ಯ ಅರಣ್ಯ ಇಲಾಖೆಗೆ ಸೇರಿದ ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಸಲಗವೊಂದು ಬುಧವಾರ ಕಂಡು ಬಂದಿದೆ.
ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಬುಧವಾರ ಕಾಡಿನಿಂದ ಪ್ರಾಕೃತಿಕವಾಗಿ ಹರಿದು ಬರುವ ನೀರಿನ ಸಂಪರ್ಕ ಸರಿಪಡಿಸಲೆಂದು ಕಾಡಿನತ್ತ ತೆರಳಿದ್ದರು. ಈ ವೇಳೆಗೆ ಮೀಸಲು ಅರಣ್ಯ ವ್ಯಾಪ್ತಿಯ ಜನವಸತಿ ಪ್ರದೇಶದಿಂದ ಸುಮಾರು 5 ಕಿ.ಮೀ.ದೂರದಲ್ಲಿ ಈ ಆನೆ ಗೋಚರಿಸಿತು.
ಅವರು ಮರಳಿ ಬಂದು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರಣ್ಯ ಸಿಬ್ಬಂದಿ ಕಾಡಿಗೆ ತೆರಳಿ, ಪರಿಶೀಲಿಸಿ, ಆನೆಗೆ ಗಾಯವಾಗಿರುವುದನ್ನು ದೃಢಪಡಿಸಿದ್ದಾರೆ. ಆನೆಯ ಮುಂಭಾಗದ ಕಾಲಿಗೆ ಏಟಾಗಿದ್ದು, ಊದಿಕೊಂಡಿದೆ. ಆನೆ ಕುಂಟುತ್ತ ಸಾಗುತ್ತಿದೆ.
ಬಾಳುಗೋಡಿನ ಪದಕ ಮಿತ್ತಡ್ಕ ಪರಿಸರದಲ್ಲಿ 10 ದಿನಗಳಿಂದ ಆನೆಯೊಂದು ಓಡಾಡುತ್ತಿತ್ತು. ತೋಟಗಳಿಗೂ ದಾಳಿ ನಡೆಸುತ್ತಿತ್ತು. ಈ ಆನೆಯೇ ಅದಾಗಿರಬಹುದು ಎಂದು ಮಿತ್ತಡ್ಕ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.