ಕಟಪಾಡಿ ಹಳೆ ಎಂಬಿಸಿ ರಸ್ತೆ ಸೇತುವೆ ಕಾಮಗಾರಿ ಬಹುತೇಕ ಪೂರ್ಣ
Team Udayavani, May 19, 2019, 6:10 AM IST
ಕಟಪಾಡಿ: ಕಲ್ಲಾಪು ಸನಿಹದ ಕಟಪಾಡಿ ಹಳೆ ಎಂಬಿಸಿ ರಸ್ತೆಯ ನಿತ್ಯಾನಂದ ಸಭಾಭವನ ಬಳಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಯು ಮುಕ್ತಾಯದ ಹಂತಕ್ಕೆ ತಲುಪಿದ್ದು ಮೇ ಮಾಸಾಂತ್ಯದಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ಹಳೆಯ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಶಿಥಿಲಗೊಂಡು, ಅಗಲ ಕಿರಿದಾಗಿತ್ತು. ಈ ಭಾಗದಲ್ಲಿ ಎರಡು ಪ್ರಮುಖ ದೇವಸ್ಥಾನಗಳು, ಸಭಾಭವನಗಳು, ಇತರೇ ಧಾರ್ಮಿಕ ಕೇಂದ್ರಗಳು ಪ್ರಮುಖವಾಗಿ ಇದೇ ರಸ್ತೆಯನ್ನು ಅವಲಂಬಿಸಿವೆ. ಈ ಕಾರಣ ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು.
40 ಲಕ್ಷ ರೂ. ವೆಚ್ಚ
ಮಾರ್ಚ್ 2ರಂದು ಲೋಕೋಪಯೋಗಿ ಇಲಾಖೆಯ ಅಂದಾಜು 40 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ಈ ಸೇತುವೆ ನಿರ್ಮಾಣ ಕಾಮಗಾರಿಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಶಿಫಾರಸುಗೊಳಿಸಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಸೇತುವೆ ಕಾಮಗಾರಿ ಬಗ್ಗೆ ಶನಿವಾರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸವಿತಾ ಅವರು ಸ್ಥಳೀಯರ ಸಮ್ಮುಖ ಪರಿಶೀಲನೆ ನಡೆಸಿದರು.
ಮೇ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತ
ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 10 ಮೀ. ಅಗಲ ಮತ್ತು ಏಳೂವರೆ ಮೀ. ಉದ್ದದ ಈ ಸೇತುವೆ ಕಾಮಗಾರಿ ನಡೆದಿದೆ. ಮೇ ಅಂತ್ಯದೊಳಗೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.
– ಸವಿತಾ, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ