ಮತ ಎಣಿಕೆ ಪ್ರಕ್ರಿಯೆ ಪರಿಪೂರ್ಣ: ಉಡುಪಿ ಡಿಸಿ
Team Udayavani, May 25, 2019, 6:00 AM IST
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭೆ ಚುನಾವಣೆಯ ಮತ ಎಣಿಕೆಯ ಎಲ್ಲ ಪ್ರಕ್ರಿಯೆಗಳು “ಪರ್ಫೆಕ್ಟ್ ಅಂದರೆ ಪರ್ಫೆಕ್ಟ್’ (ಪರಿಪೂರ್ಣ) ಆಗಿ ನಡೆದಿವೆ. ಒಂದು ಸಣ್ಣ ಲೋಪವೂ ಇಲ್ಲ ಎಂದು ಕ್ಷೇತ್ರದ ಚುನಾವಣಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸೂಕ್ಷ್ಮ ವಿವರಗಳನ್ನು ಕೂಡ ಅಚ್ಚುಕಟ್ಟಾಗಿ ನಡೆಸಿದ್ದೇವೆ. ನಿಗದಿತ ವೇಳೆಗೆ ಅಂದರೆ 7.30ಕ್ಕೆ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಮ್) ತೆರೆದು 8 ಗಂಟೆಗೆ ಮತ ಎಣಿಕೆ ಆರಂಭಿಸಲಾಗಿದೆ. ಸಂಜೆ 5 ಗಂಟೆಯ ವೇಳೆಗೆ ಎಲ್ಲ ಫಲಿತಾಂಶ ಸಿದ್ಧವಾಗಿತ್ತು. ವಿವಿ ಪ್ಯಾಟ್ ಕೌಂಟಿಂಗ್ ನಡೆಯುತ್ತಿತ್ತು. 6 ಗಂಟೆಗೆ ಎಲ್ಲವೂ ಪೂರ್ಣಗೊಂಡಿತ್ತು. ಆನ್ಲೈನ್ ಪ್ರಕ್ರಿಯೆ ಆಗಿ 6.30ರ ವೇಳೆಗೆ ವಿಜಯಿ ಅಭ್ಯರ್ಥಿಗೆ ಪ್ರಮಾಣಪತ್ರ ನೀಡಿದೆವು ಎಂದವರು ಹೇಳಿದ್ದಾರೆ.
41 ವಿವಿ ಪ್ಯಾಟ್ಗಳ ಎಣಿಕೆ
ಪ್ರತಿ ವಿಧಾನಸಭಾ ಕ್ಷೇತ್ರಗಳ ತಲಾ 5 ಮತ್ತು ಚಿಕ್ಕಮಗಳೂರಿನ ಒಂದು ಮತಗಟ್ಟೆಯ ಹೆಚ್ಚುವರಿ ವಿವಿ ಪ್ಯಾಟ್ ಸೇರಿದಂತೆ ಒಟ್ಟು 41 ವಿವಿ ಪ್ಯಾಟ್ಗಳಲ್ಲಿನ ಸ್ಲಿಪ್ ಎಣಿಸಲಾಗಿದೆ. ಇದಕ್ಕೆ 2 ತಾಸು ತಗಲಿದೆ ಎಂದು ತಿಳಿಸಿದ್ದಾರೆ.
ಮೇ 27ರ ವರೆಗೆ ನೀತಿ ಸಂಹಿತೆ
ಚುನಾವಣಾ ನೀತಿ ಸಂಹಿತೆ 27ರ ವರೆಗೆ ಜಾರಿಯಲ್ಲಿದ್ದು, ಅದುವರೆಗೆ ಜಿ.ಪಂ. ಅಧ್ಯಕ್ಷರು, ಶಾಸಕರ ಕಚೇರಿ ಇತ್ಯಾದಿ ತೆರೆದಿರುವುದಿಲ್ಲ. ಹೊಸ ಯೋಜನೆ, ಟೆಂಡರ್ಗೆ ಅವಕಾಶವಿಲ್ಲ. ಸರಕಾರದ ಕೆಲವು ಸೌಲಭ್ಯಗಳು ಕೂಡ ಲಭ್ಯವಾಗುವುದಿಲ್ಲ ಎಂದಿದ್ದಾರೆ.