ಹಲಕುರ್ಕಿಯಲ್ಲಿ ಕರೆಂಟ್ ಕಾಟ: ಕುಡಿಯುವ ನೀರಿಗೆ ಪರದಾಟ
Team Udayavani, May 26, 2019, 10:20 AM IST
ಬಾದಾಮಿ: ಹಲಕುರ್ಕಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರ ಪರದಾಟ.
ಬಾದಾಮಿ: ಹಲಕುರ್ಕಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಮೇಲೆ ಮರ ಉರುಳಿ ಟಿಸಿ ಸುಟ್ಟ ಕಾರಣ ಮೂರು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಗ್ರಾಮದಲ್ಲಿ ಒಂದೇ ಬೋರ್ ಇದ್ದು, ಜನರು ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತದಿಂದ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ತಾಲೂಕಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮ ಪಂಚಾಯತ ಹೊಂದಿದೆ. ಸುಮಾರು 3000 ಜನಸಂಖ್ಯೆ ಹೊಂದಿದ್ದು, ಟಿಸಿ ಸುಟ್ಟು ಮೂರು ದಿನಗಳಾದರೂ ಸಹಿತ ಕೆಇಬಿ ಅಧಿಕಾರಿಗಳು ಹೊಸ ಟಿಸಿ ಜೋಡಿಸದ ಕಾರಣ ಗ್ರಾಮಸ್ಥರು ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೆಇಬಿ ಅಧಿಕಾರಿಗಳು ತುರ್ತು ಗಮನಹರಿಸಿ ಹೊಸ ಟಿಸಿ ಜೋಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ತಹಶೀಲ್ದಾರ್ ಭೇಟಿ: ಹಲಕುರ್ಕಿಯಲ್ಲಿ ನೀರಿನ ಸಮಸ್ಯೆ ಕಂಡು ಗ್ರಾಮಕ್ಕೆ ಶನಿವಾರ ಸಂಜೆ ತಹಶೀಲ್ದಾರ್ ಸುಹಾಸ ಇಂಗಳೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿಯೇ ಕೆಇಬಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರ ಹೊಸ ಟಿಸಿ ಜೋಡಿಸಿ ವಿದ್ಯುತ್ ಸಂಪರ್ಕ ಮಾಡಬೇಕು ಎಂದು ಸೂಚನೆ ನೀಡಿದರು.