ಜೂ.10ರಿಂದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ
ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ವಾಣಿಶ್ರೀ ಮಾಹಿತಿ
Team Udayavani, May 28, 2019, 10:34 AM IST
ದೇವನಹಳ್ಳಿ: ಜೂನ್ 10ನೇ ತಾರೀಖೀನಿಂದ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ಮತ್ತು 1ನೇ ತರಗತಿವರೆಗೆ ಆಂಗ್ಲ ಮಧ್ಯಮ ಪ್ರಾರಂಭವಾಗಲಿದ್ದು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಪ್ರಾಂಶುಪಾಲೆ ವಾಣಿಶ್ರೀ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಗತ್ಯ ಸೌಲಭ್ಯ: ಎಲ್ಕೆಜಿ ಮತ್ತು 1ನೇ ತರಗತಿ ವರೆಗೆ ಆಂಗ್ಲ ಮಧ್ಯ ಮ ಪ್ರಾರಂಭಿಸಲಾಗುತ್ತಿದೆ. ಎಲ್ ಕೆಜಿ ಗೆ 40 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ. ನುರಿತ ಶಿಕ್ಷಕರು ಮತ್ತು ಆಯಾ ಅವರನ್ನು ನೇಮಿಸಿಕೊಳ್ಳಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್ಕೆಜಿ ಮತ್ತು ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ವ್ಯಾಸಂಗದ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ , ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರತಿ ತಾಲೂಕಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿದೆ. ಪೋಷಕರು ತಮ್ಮ ಮಕ್ಕಳ ಹೆಸರನ್ನು ದಾಖಲಿಸಿ ಪ್ರಯೋಜನ ಪಡೆಯಬೇಕೆಂದರು.
ಜೂನ್ 10 ನೇ ತಾರೀಖೀನಂದು ಎಲ್ಕೆಜಿ ಮತ್ತು 1ನೇ ತರಗತಿ ವರೆಗೆ ಆಂಗ್ಲ ಮಧ್ಯ ಮ ಪ್ರಾರಂಭವಾಗಲಿದ್ದು ಶಾಸಕ ನಿಸರ್ಗ ಎಲ್ ಎನ್ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ನೀಲಗಿರಿ ಮರ ತೆರವುಗೊಳಿಸಿ: ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಗದೀಶ್, ಶಾಲೆ ಆವರಣ ಸುಮಾರು 10 ಎಕರೆ ಜಾಗವಿದ್ದು ಈ ಪೈಕಿ 2.5 ಎಕರೆಗೂ ಹೆಚ್ಚು ಜಾಗದಲ್ಲಿ ನೀಲಗಿರಿ ಮರಗಳಿವೆ. ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರ ಕಟಾವು ಮಾಡಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೈದಾನದಲ್ಲಿ ಸಿದ್ದಪಡಿಸಲು ನೀಲಗಿರಿ ಮರಗಳಿದ್ದು ಕಟಾವು ಅನಿವಾರ್ಯ. ಶಾಲೆ ಸುತ್ತಲೂ ತಡೆಗೋಡೆ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.
ವರದಾನ: ವಿಶ್ವನಾಥ ಗ್ರಾಮದಿಂದ 1 ಕಿ.ಮೀ ದೂರದ ಶಿಕ್ಷಕರಿಗೆ ಮತ್ತು ಸಿಬ್ಬಂದಿ ಅವರಿಗೆ ಸರ್ಕಾರಿ ಬಸ್ಗಳ ನಿಲುಗಡೆ ಆಗಬೇಕು. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಕೆಜಿ ಮತ್ತು 1ನೇ ತರಗತಿ ವರೆಗೆ ಆಂಗ್ಲ ಮಧ್ಯಮ ಪ್ರಾರಂಭವಾಗುತ್ತಿ ರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಅನುಕೂಲ. ಪೋಷಕರಿಗೆ ಶಾಲೆಗಳ ವ್ಯಾಮೋಹ ಒಂದಿಷ್ಟು ಕಡಿಮೆ ಆಗುವುದು. ಬಡ ಮಕ್ಕಳಿಗೆ ಈ ಯೋಜನೆ ವರದಾನವಾಗಲಿದೆ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಣ್ಣ, ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಶ್ರೀನಿವಾಸ್, ಮೂರ್ತಿ, ಎಸ್.ಬಿ.ಶಿವಕುಮಾರ್, ಮುಖ್ಯ ಶಿಕ್ಷಕ ರುದ್ರಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಸುಬಾನ್ಸಾಬ್ ಇದ್ದರು.