ಶಾಲೆಗಳಲ್ಲಿ ಸಿಎಂ ಗ್ರಾಮ ವಾಸ್ತವ್ಯ
ಸರ್ಕಾರಿ ಶಾಲೆಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
Team Udayavani, Jun 3, 2019, 6:10 AM IST
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸೋಲು ಮತ್ತು ಸರ್ಕಾರದ ಅಸ್ಥಿರತೆ ಆತಂಕದ ಬೆನ್ನಲ್ಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ‘ಗ್ರಾಮ ವಾಸ್ತವ್ಯ’ ಪರಿಕಲ್ಪನೆಯನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದ್ದಾರೆ. ಹದಿಮೂರು ವರ್ಷಗಳ ಹಿಂದೆ ಜಾರಿಗೊಳಿಸಿದ್ದ ಈ ಯೋಜನೆಯನ್ನು ಈ ಬಾರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಉದ್ದೇಶದೊಂದಿಗೆ ಬದಲಾಯಿಸಲಾಗುತ್ತಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಭಾನುವಾರ ಅಭಿಪ್ರಾಯ ಹಂಚಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಸಲು ನೆರವಾಗುವುದು ಗ್ರಾಮ ವಾಸ್ತವ್ಯ. ಶೀಘ್ರವೇ ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ,’ ಎಂದು ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿಯವರು ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊತ್ತ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಹಾಗೂ ಸ್ಥಳೀಯ ರೈತರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಈ ಬಾರಿ ಒತ್ತು ನೀಡುವ ನಿರೀಕ್ಷೆ ಇದೆ.
ಲಯಕ್ಕೆ ತರಲು ಕಸರತ್ತು: ಸದ್ಯ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ, ಮೈತ್ರಿ ನಾಯಕರಲ್ಲೇ ಪರಸ್ಪರ ಅಪನಂಬಿಕೆಯಿಂದ ಗೊಂದಲ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಾಂಗ್ರೆಸ್, ಜೆಡಿಎಸ್ನ ಕೆಲ ಶಾಸಕರು ಬಿಜೆಪಿಯತ್ತ ಆಕರ್ಷಿತರಾಗಿ ರಾಜೀನಾಮೆ ನೀಡಲು ಮುಂದಾದರೆ ಮೈತ್ರಿ ಸರ್ಕಾರವೇ ಪತನವಾಗುವ ಭೀತಿಯೂ ಆಡಳಿತ ಪಕ್ಷಕ್ಕೆ ಇಲ್ಲದಿಲ್ಲ. ಪ್ರಧಾನಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿಯವರು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನೂ ಭೇಟಿಯಾಗಿ ಚರ್ಚಿಸಿದ್ದರು. ಆ ಬಳಿಕ ಗೊಂದಲಗಳಿಗೆ ತೆರೆ ಎಳೆಯಲು ಮುಂದಾದಂತಿರುವ ಮುಖ್ಯಮಂತಿಗಳು ಕ್ರಮೇಣ ಆಡಳಿತ ಯಂತ್ರ ಎಂದಿನ ಕಾರ್ಯ ನಿರ್ವಹಣೆಗೆ ಮರಳುವಂತೆ ಮಾಡುವ ಕಾರ್ಯಕ್ಕೆ ಒತ್ತು ನೀಡಲಾರಂಭಿಸಿದಂತಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಶನಿವಾರ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಬರ ಪರಿಸ್ಥಿತಿ ನಿರ್ವಹಣೆ, ಆಯವ್ಯಯದಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡುವುದಾಗಿ ಪ್ರಕಟಿಸುವ ಮೂಲಕ ತಮ್ಮ ಹಿಂದಿನ ಆಡಳಿತ ವೈಖರಿಯನ್ನು ಮತ್ತೆ ಮುಂದುವರಿಸಲು ನಿರ್ಧರಿಸಿದಂತಿದ್ದು, ಕುತೂಹಲ ಮೂಡಿಸಿದೆ.
ಮೆಚ್ಚುಗೆ: ಈ ಹಿಂದೆ ವಿಜಯಪುರದ ಎಚ್ಐವಿ ಸೋಂಕುಪೀಡಿತರೊಬ್ಬರ ಮನೆಯನ್ನು ಆಯ್ಕೆ ಮಾಡಿಕೊಂಡು ಎಚ್ಐವಿ ಪೀಡಿತರ ಬಗ್ಗೆ ಸಮಾಜದಲ್ಲಿನ ತಪ್ಪು ನಂಬಿಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ್ದರು. ಈ ವಿಷಯ ತಿಳಿದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗ್ರಾಮ ವಾಸ್ತವ್ಯದಿಂದಾಗಿ ಸುಮಾರು ಸಾವಿರ ಪ್ರೌಢಶಾಲೆಗಳು, ಸುಮಾರು 500 ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಅನುಕೂಲವಾಯಿತು. ಹಾಗೆಯೇ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ ಜತೆಗೆ ವಿಕಲಚೇತನರಿಗೆ ಮಾಸಾಶನ ನೀಡುವ ಸೌಲಭ್ಯ ಕಲ್ಪಿಸಿದ್ದು ಸಹ ಗ್ರಾಮ ವಾಸ್ತವ್ಯದ ಕೊಡುಗೆ ಎಂಬುದು ಮುಖ್ಯಮಂತ್ರಿಗಳ ನಂಬಿಕೆ ಎಂದು ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್