ಕಟ್ಟಡ ಛಾವಣಿ ಕುಸಿತ; ಹೆಚ್ಚಾಯ್ತು ಭಯ
Team Udayavani, Jun 10, 2019, 11:14 AM IST
ಬೀದರ: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ಕಟ್ಟಡ ಮುಂಭಾಗದ ಛಾವಣಿ ಬಿದ್ದಿರುವುದು.
ಬೀದರ: ಬಹುಕೋಟಿ ರೂ.ವೆಚ್ಚದಲ್ಲಿ ನಿಮಾರ್ಣಗೊಂಡಿರುವ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ಉದ್ಘಾಟನೆಗೊಂಡ ಎರಡೇ ವರ್ಷದಲ್ಲಿ ಆಸ್ಪತ್ರೆ ಮುಂಭಾಗದ ಛಾವಣಿ ಕುಸಿಯಲು ಶುರುವಾಗಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಅಲ್ಲದೇ ರೋಗಿಗಳಲ್ಲಿ ಆತಂಕ ಹುಟ್ಟುವಂತೆ ಮಾಡಿದೆ.
13-08-2017ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿದ್ದರು. ನಗರದಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಮೂಲಕ ಈ ಭಾಗದ ಬಡವರಿಗೆ ಆರೋಗ್ಯ ಸೇವೆ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡ ದಿನದಿಂದಲೇ ಕಳಪೆಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ತರಾತುರಿಯಲ್ಲಿ ಆಸ್ಪತ್ರೆ ಉದ್ಘಾಟಿಸುವುದು ಬೇಡವೆಂದು ವಿರೋಧ ವ್ಯಕ್ತಪಡಿಸಿದ್ದವು.
ಕಳಪೆ ಕಾಮಗಾರಿ ಕುರಿತು ಅನೇಕ ಬಾರಿ ಆರೋಪಗಳು ಕೇಳಿ ಬಂದಿದ್ದರೂ ಜಿಲ್ಲೆಯ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿದ್ದಿಲ್ಲ. ಆದರೆ, ಶನಿವಾರ ಸಂಜೆ ಸುರಿದ ಸಾಧಾರಣ ಮಳೆಗೆ ಆಸ್ಪತ್ರೆ ಮುಂಭಾಗದ ಛಾವಣಿ ಕುಸಿಯುವ ಮೂಲಕ ಕಟ್ಟಡ ಕಾಮಗಾರಿ ಕಳಪೆ ಎಂಬುದು ಸಾಬೀತು ಆದಂತಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಅಲ್ಪ ಪ್ರಮಾಣ ಮಳೆಗೇ ಹೀಗಾದರೆ ಭಾರೀ ಮಳೆ ಬಂದರೆ ಕಟ್ಟಡ ಉಳಿಯುತ್ತಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುವಂತಾಗಿದೆ.
ಯಾರು ಹೊಣೆ: ಸರ್ಕಾರದ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆಯ ದುಸ್ಥಿತಿಗೆ ಯಾರು ಹೊಣೆ ಎಂಬ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ. ಸದ್ಯ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆ ಎಂದು ಗೊತ್ತಾದರೂ ಯಾವ ಅಧಿಕಾರಿಗಳು, ಸಂಬಂಧಿಸಿದ ರಾಜಕಾರಣಿಗಳು ಯಾಕೆ ಮೌನಕ್ಕೆ ಶರಣಾಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಸಚಿವರೂ ಭೇಟಿ ನೀಡಿದ್ದರು: ಎರಡು ತಿಂಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿದ್ದರು. ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಳಪೆ ಕಾಮಗಾರಿ ಕುರಿತು ಅನೇಕ ಬಾರಿ ಆರೋಪಗಳು ಕೇಳಿ ಬಂದಿದ್ದರೂ ಜಿಲ್ಲೆಯ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿದ್ದಿಲ್ಲ. ಆದರೆ, ಶನಿವಾರ ಸಂಜೆ ಸುರಿದ ಸಾಧಾರಣ ಮಳೆಗೆ ಆಸ್ಪತ್ರೆ ಮುಂಭಾಗದ ಛಾವಣಿ ಕುಸಿಯುವ ಮೂಲಕ ಕಟ್ಟಡ ಕಾಮಗಾರಿ ಕಳಪೆ ಎಂಬುದು ಸಾಬೀತು ಆದಂತಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಆಸ್ಪತ್ರೆಯ ಕಟ್ಟಡ ಕಾಮಗಾರಿ ಆರಂಭದಿಂದ, ಆಸ್ಪತ್ರೆಯಲ್ಲಿ ಖರೀದಿಸಿದ ವಸ್ತುಗಳವರೆಗೂ ರಾಜ್ಯಮಟ್ಟದ ಅಧಿಕಾರಿಗಳ ತಂಡದಿಂದ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಅಕ್ರಮಕ್ಕೆ ಸಾಥ್ ನೀಡಿದವರ, ಅಕ್ರಮ ನಡೆಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಈ ಅಕ್ರಮದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಗುತ್ತೆದಾರರು ಯಾರೇ ಶಾಮೀಲಾಗಿದ್ದರೂ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸವಾಗಬೇಕು.
•ಗುರುನಾಥ ರಾಜಗೀರಾ,
ಹೋರಾಟಗಾರ