ಶಶಿಕುಮಾರ್ ಕಡೂರು ತಾಪಂ ಉಪಾಧ್ಯಕ್ಷ
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಸಲಹೆ
Team Udayavani, Jun 16, 2019, 5:21 PM IST
ಕಡೂರು: ತಾಪಂ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಪ್ಪನಹಳ್ಳಿ ಶಶಿಕುಮಾರ್ ಅವರನ್ನು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಅಭಿನಂದಿಸಿದರು.
ಕಡೂರು: ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಮತಿಘಟ್ಟ ಕ್ಷೇತ್ರದ ಮಲ್ಲಪ್ಪನಹಳ್ಳಿ ಶಶಿಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿದ್ದ ದಾಸಯ್ಯನಗುತ್ತಿ ಚಂದ್ರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಶಶಿಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಬಿ.ಆರ್.ರೂಪಾ ಘೋಷಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ತಾಪಂ ಸದಸ್ಯರು ಕೀಳರಿಮೆಯನ್ನು ಬಿಟ್ಟು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಪಕ್ಷದ ಆಂತರಿಕ ಒಪ್ಪಂದದಂತೆ ಉಪಾಧ್ಯಕ್ಷರಾಗಿ ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಅವರಿಗೆ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪರ ಕೆಲಸ ಮಾಡಲಿ ಎಂದು ಹಾರೈಸಿದರು.
ನೂತನ ಉಪಾಧ್ಯಕ್ಷ ಶಶಿಕುಮಾರ್ ಮಾತನಾಡಿ, ಪಕ್ಷದ ಮುಖಂಡರು ನಮ್ಮನ್ನು ತಾಪಂಗೆ ಆಯ್ಕೆ ಮಾಡಿದ ಮತಿಘಟ್ಟ ಕ್ಷೇತ್ರದ ಜನರು ಹಾಗೂ ಸ್ನೇಹಿತರ ಅಭಿಮಾನದಿಂದ ಉಪಾಧ್ಯಕ್ಷನಾಗಿದ್ದೇನೆ. ಈ ಸ್ಥಾನಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಭಾರತಮ್ಮ ಪ್ರಹ್ಲಾದ್, ಎಪಿಎಂಸಿ ಅಧ್ಯಕ್ಷ ಶಿವುಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಜಿ.ಶ್ರೀನಿವಾಸ್ಮೂರ್ತಿ, ಪಿ.ಸಿ. ಪ್ರಸನ್ನ, ದೊಣ್ಣೆಕೋರನಹಳ್ಳಿ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜ್, ತಾ.ಪಂ. ಮಾಜಿ ಉಪಾಧ್ಯಕ್ಷ ಎಚ್.ಜಿ ರುದ್ರಮೂರ್ತಿ, ಚಂದ್ರಮೌಳಿ, ಜಿಮ್ ಶ್ರೀನಿವಾಸ್ ಇತರರಿದ್ದರು.