ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯಿಂದ: ಸಾಮ್ನಾದಲ್ಲಿ ಘೋಷಣೆ
Team Udayavani, Jun 19, 2019, 11:17 AM IST
ಮುಂಬಯಿ : ಶಿವಸೇನೆಯ ವ್ಯಕ್ತಿಯೋರ್ವ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷವು ತನ್ನ ಮುಖವಾಣಿ ಸಾಮ್ನಾ ದ ಸಂಪಾದಕೀಯದಲ್ಲಿ ಬರೆದಿದೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಕೇಂದ್ರ ಸರಕಾರದ ಕಟು ಟೀಕಾಕಾರನಾಗಿದ್ದು ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಬಿಜೆಪಿ ಜತೆಗಿನ ಮಿತೃತ್ವವನ್ನು ಮತ್ತೆ ಆರಂಭಿಸಿದ್ದ ಶಿವಸೇನೆ ಇದೀಗ, ಶಿವಸೇನೆಯ ಓರ್ವ ಸದಸ್ಯ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿರುವುದು ಉಭಯ ಪಕ್ಷಗಳ ನಡುವಿನ ಜಿದ್ದಾಜಿದ್ದಿಯ ವಿಷಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಶಿವಸೇನೆಯು ತನ್ನ ಪಣದೊಂದಿಗೆ ಮುಂದಡಿ ಇಟ್ಟಿದೆ. ರಾಜ್ಯ ವಿಧಾನಸಭೆಯನ್ನು ಸಂಪೂರ್ಣವಾಗಿ ಕೇಸರಿಮಯ ಗೊಳಿಸುವ ಪಣವನ್ನು ನಾವು ತೊಟ್ಟಿದ್ದೇವೆ. ಅಂತೆಯೇ ಪಕ್ಷದ 54ನೇ ಸಂಸ್ಥಾಪನಾ ದಿನದಂದು, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯ ಓರ್ವ ವ್ಯಕ್ತಿ ಆಗುತ್ತಾರೆ’ ಎಂದು ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನೆ ಘೋಷಿಸಿದೆ.
ಪಕ್ಷವು ಸಾಗಿ ಬಂದಿರುವ ಹಾದಿಯನ್ನು ಅವಲೋಕಿಸಿರುವ ಸಾಮ್ನಾ ಸಂಪಾದಕೀಯ, ‘ಪಕ್ಷದ ಬೇರುಗಳು ಮಹಾರಾಷ್ಟ್ರದಲ್ಲಿ ಬಲಗೊಂಡಿವೆ; ದಿಲ್ಲಿಯಲ್ಲಿ ಅದರ ಕೊಂಬೆಗಳು ಚಾಚಿಕೊಳ್ಳುತ್ತಿವೆ’ ಎಂದು ಹೇಳಿದೆ.