ಹೈಕ ವಿಮೋಚನಾ ಹೋರಾಟಗಾರ ಸಿದ್ರಾಮಪ್ಪ ಗುಂಡಪ್ಪ ಕಣಜಿ ನಿಧನ
Team Udayavani, Jun 21, 2019, 5:36 AM IST
ಹುಮನಾಬಾದ: ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಹಿರಿಯ ಹೋರಾಟಗಾರ ಸಿದ್ರಾಮಪ್ಪ ಗುಂಡಪ್ಪ ಕಣಜಿ(91) ಅವರು ಬುಧವಾರ ಮಧ್ಯರಾತ್ರಿ ಮಹಾರಾಷ್ಟ್ರ ಸೊಲ್ಲಾಪೂರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು-ಬಳಗ ಅಗಲಿದ್ದಾರೆ. 1928ರ ಏ.4ರಂದು ಗುಂಡಪ್ಪ ಮತ್ತು ಗಂಗಮ್ಮ ಅವರ ಹಿರಿಯ ಪುತ್ರರಾಗಿ ಜನಿಸಿದ ಸಿದ್ರಾಮಪ್ಪ ಅವರು, 1968ರಲ್ಲಿ ದುಬಲಗುಂಡಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ, ಅದೇ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ನಂತರ ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಮತ್ತು 1985-86ನೇ ಸಾಲಿನಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. 1947-48ಕ್ಕೂ ಮುನ್ನವೇ 18-20ನೇ ವರ್ಷದಲ್ಲಿಯೇ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸೆರೆವಾಸ ಅನುಭವಿಸಿದ್ದಾರೆ. ದುಧನಿ ಶಿಬಿರದಲ್ಲಿ ಭೂಗತ ಕಾರ್ಯ ನಿರ್ವಹಿಸಿದ ಪ್ರಮುಖರಲ್ಲಿ ಇವರೂ ಒಬ್ಬರು. ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ|ಚಂದ್ರಶೇಖರ ಪಾಟೀಲ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.