ಗ್ರಾಮ ವಾಸ್ತವ್ಯ ಅರ್ಜಿ ಸ್ವೀಕರಿಸಿ ಹೋಗುವುದಕ್ಕಲ್ಲ: ಚಂಡರಕಿಯಲ್ಲಿ ಸಿಎಂ
ಸಿಎಂಗೆ ಅದ್ಧೂರಿ ಸ್ವಾಗತ, ಹೂಮಳೆ, ಸರ್ಕಾರಿ ಬಸ್ನಲ್ಲಿ ಪ್ರಯಾಣ
Team Udayavani, Jun 21, 2019, 1:49 PM IST
ಯಾದಗಿರಿ : ಕೇವಲ ರಾತ್ರಿಗೆ ಹಳ್ಳಿಗೆ ಬಂದು ಅರ್ಜಿ ಸ್ವೀಕರಿಸಿ ಹೋಗುವ ಕಾರ್ಯಕ್ರಮ ಗ್ರಾಮ ವಾಸ್ತವ್ಯ ಅಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಚಂಡರಕಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆ ನಡೆಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಳ್ಳಿಗಳಿಗೆ ಮೂಲ ಸೌಕರ್ಯ ಸಿಕ್ಕಾಗ ನಿಜವಾದ ಸ್ವಾತಂತ್ರ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಮಹಾತ್ಮ ಗಾಂಧೀಜಿ ಅವರ ಕಲ್ಪನೆ ಇಟ್ಟುಕೊಂಡು ನಾನು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದರು.
12 ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇನೆ.ಹಲವಾರು ರೀತಿಯ ಕಾರ್ಯಕ್ರಮಗಳಿಗೆ ನಿಮ್ಮಿಂದ ಅರಿವು ಮೂಡಿಸಿಕೊಂಡಿದ್ದೇನೆ ಎಂದರು.
ಜಿಲ್ಲೆಗೆ ಯಾವ ಸಮಸ್ಯೆ ಗಳು ಇವೆ ಎನ್ನುವ ಕುರಿತು ಜನಪ್ರತಿನಿಧಿಗಳು ನನ್ನ ಅರಿವಿಗೆ ತಂದಿದ್ದಾರೆ ಅವುಗಳನ್ನು ಸಾಧ್ಯವಾದಷ್ಟು ಇಲ್ಲೇ ಬಗೆ ಹರಿಸುತ್ತೇನೆ ಎಂದರು.
ಗ್ರಾಮ ವಾಸ್ತವ್ಯ ಪ್ರತೀ ತಿಂಗಳು ಮುಂದುವರಿಯುತ್ತದೆ. ಶಾಲೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಮಕ್ಕಳಿಗೆ ಉತ್ತಮವಾದ ಶಾಲೆಗಳನ್ನು ಕೊಡಬೇಕು ಎನ್ನುವ ಉದ್ದೇಶ ನನ್ನದು ಎಂದರು.
ಕುಡಿಯುವ ನೀರಿನ ಸೌಲಭ್ಯ, ಪಶು ಆಸ್ಪತ್ರೆ, ರಸ್ತೆಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಯಾವುದೇ ಗೊಂದಲ ಬೇಡ, ಈ ಸರ್ಕಾರ ಸ್ಥಿರವಾಗಿ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತದೆ ಎಂದರು.
ರೈತರಿಗೆ ಹೊಸ ಸಾಲ
ಮುಂಗಾರು ಬೆಳೆ ಬೆಳೆಯಲು ರೈತರಿಗೆ ಹೊಸ ಸಾಲ ನೀಡುವುದಾಗಿ ಈ ವೇಳೆ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗೊಂದಲ
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ನಾಗನಗೌಡ ಕುಂದಕೂರ್ ಅವರು ವೇದಿಕೆಯಲ್ಲೇ ಕಾರ್ಯಕ್ರಮ ಆಯೋಜಕರ ವಿರುದ್ಧ ಕಿಡಿಯಾದರು. ಸಿಎಂ ಎದುರಲ್ಲೇ ಪುತ್ರನಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡದೇ ಇದ್ದುದಕ್ಕಾಗಿ ಕೆಂಡಾಮಂಡಲವಾದರು. ತಕ್ಷಣ ವೇದಿಕೆಯಲ್ಲಿದ್ದವರು ಸಮಾಧಾನ ಪಡಿಸಿದರು.
ಅದ್ಧೂರಿ ಸ್ವಾಗತ
ಸಿಎಂ ಎಚ್ಡಿಕೆ ಅವರು ಚಂಡರಕಿಗೆ ಸರ್ಕಾರಿ ಬಸ್ನಲ್ಲಿ ಪ್ರಯಾಣ ನಡೆಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಗ್ರಾಮಸ್ಥರು ನಿಂತು ಸಿಎಂಗೆ ಸ್ವಾಗತ ಕೋರಿದರು. ಚಂಡರಕಿಗೆ ಆಗಮಿಸುತ್ತಿದ್ದಂತೆ ಕಾರಿನ ಮೇಲೆ ಹೂವಿನ ಮಳೆ ಸುರಿಸಿದರು. ಡೊಳ್ಳು, ನಗಾರಿ ಗಳನ್ನು ಬಾರಿಸಿ ಸ್ವಾಗತಿಸಲಾಯಿತು. ವಿಶೇಷವಾಗಿ ಜೆಡಿಎಸ್ ನಾಯಕ ಕೋನರೆಡ್ಡಿ ಅವರು ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು.