8 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಿ ಪ್ರತಿಭಟನೆ
Team Udayavani, Jun 25, 2019, 7:56 AM IST
ಕೆರೂರ: ಪಟ್ಟಣದಲ್ಲಿ ಅಶೋಕ ಜಿಗಳೂರ, ಪತ್ನಿ ಪ್ರಭಾವತಿ ಜತೆ ಸೇರಿ ಸುಮಾರು 8 ಸಾವಿರ ಲೀಟರ್ ಮಳೆ ನೀರನ್ನು ಸಂಗ್ರಹಿಸಿದರು.
ಕೆರೂರ: ಸುರಿಯುವ ಮಳೆಯಲ್ಲಿಯೇ ಸುಮಾರು 8 ಸಾವಿರ ಲೀಟರ್ ಮಳೆ ನೀರು ಸಂಗ್ರಹಿಸಿದ ಬಿಜೆಪಿ ಧುರೀಣ ಹಾಗೂ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶೋಕ ಜಿಗಳೂರ ಸಮರ್ಪಕ ನೀರು ಪೂರೈಕೆ ಮಾಡದ ಪಪಂ ಧೋರಣೆ ಖಂಡಿಸಿ ವಿನೂತನ ಪ್ರತಿಭಟಿಸಿದರು.
ರವಿವಾರ ಸುರಿದ ಮಳೆಯ ನೀರನ್ನು ದಂಪತಿ ಸೇರಿ, ಕೊಡ ಮತ್ತು ಬಕೆಟ್ಗಳಲ್ಲಿ ಹಿಡಿದು ಮನೆಯಲ್ಲಿ ಬ್ಯಾರೆಲ್, ಸಿಂಟೆಕ್ಸ್, ನೀರಿನ ಟ್ಯಾಂಕ್ ಸೇರಿದಂತೆ ಮನೆಯಲ್ಲಿ ನೀರು ಸಂಗ್ರಹಿಸಲು ಇಟ್ಟಿದ್ದ ಬಹುತೇಕ ಎಲ್ಲ ಸಂಗ್ರಹಾರಗಳಲ್ಲಿ ಅಂದಾಜು 8 ಸಾವಿರ ಲೀಟರ್ ನಷ್ಟು ಮಳೆ ನೀರು ಸಂಗ್ರಹಿಸಿದರು.
ಅದಕ್ಕೆ ಕಾರಣ ಹೇಳಿದ ಅಶೋಕ, ಕಳೆದ ಒಂದು ತಿಂಗಳಿನಿಂದ ಸ್ಥಳೀಯ ಪಟ್ಟಣ ಪಂಚಾಯತ ಕುಡಿಯುವ ನೀರಿನ ನಲ್ಲಿಗಳಿಗೆ ನೀರೇ ಬಿಟ್ಟಿದ್ದಿಲ್ಲ.ಬಳಕೆಗಾಗಿ ಖಾಸಗಿ ನೀರಿನ ಟ್ಯಾಂಕರ್ಗಳನ್ನೇ ಆಶ್ರಯಿಸಬೇಕಿದೆ. ಉಚಿತವಾಗಿ ಸಿಗುವ ಮಳೆ ನೀರು ಸಂಗ್ರಹಿಸಿ, ಸುಮಾರು ಒಂದು ವಾರಕ್ಕೂ ಹೆಚ್ಚು ಅವಧಿಗೆ ಮನೆ ಬಳಕೆಗೆ ಯಾವುದೇ ಚಿಂತೆ ಇಲ್ಲ. ಮೇಲಿನಿಂದ ಪೈಪ್ಗ್ಳಲ್ಲಿ ಬೀಳುವ ಮಳೆ ನೀರು ಸಂಗ್ರಹಕ್ಕೆ ಯಾವುದೇ ಖರ್ಚಿಲ್ಲ. ಶ್ರಮಬೇಕಷ್ಟೇ ಎಂದು ಹೇಳಿದರು.