ದೇವೇಗೌಡರು ಹೇಳಿದಂತೆ ನಡೆದಿದ್ದಾರಾ?: ರಾಜಣ್ಣ
Team Udayavani, Jun 29, 2019, 3:00 AM IST
ಬೆಂಗಳೂರು: “ಮಾಜಿ ಪ್ರಧಾನಿ ದೇವೇಗೌಡರು ದೊಡ್ಡವರು. ಅವರು ಯಾವಾಗಾದರೂ ಹೇಳಿದಂತೆ ನಡೆದುಕೊಂಡಿದ್ದಾರೆಯೇ?’ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.
ಮಧ್ಯಂತರ ಚುನಾವಣೆ ಕುರಿತು ದೇವೇಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ದೇವೇಗೌಡರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದರು. ಆ ನಂತರ ಬಾಂಡ್ ಪೇಪರ್ ಎಲ್ಲಿದೆ ಎಂದು ಕೇಳಿದರು. ಈಗ ಕಾಂಗ್ರೆಸ್ನವರಿಗೆ ಬಾಂಡ್ ಪೇಪರ್ ಬರೆದುಕೊಟ್ಟಿದ್ದಾರೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
“ಮೋದಿಗೆ ಮತ ಹಾಕಿ ನಮಗೆ ಕೆಲಸ ಕೇಳುತ್ತೀರಾ’ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಯಾವುದೇ ಪಕ್ಷಕ್ಕೆ ಸೀಮಿತವಾದವರಲ್ಲ. ಅವರು ರಾಜ್ಯದ ಜನತೆಗೆ ಮುಖ್ಯಮಂತ್ರಿ. ಜೆಡಿಎಸ್ನವರು ಇರುವುದೇ 37 ಶಾಸಕರು. ಇವರ ಪರ ಜನಾಭಿಪ್ರಾಯ ಇದೆಯಾ ಎಂದು ಪ್ರಶ್ನಿಸಿದರು.
ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ರಾಜಣ್ಣ, ಸಿದ್ದರಾಮಯ್ಯ ಆ ರೀತಿ ಹೇಳಲು ಸಾಧ್ಯವಿಲ್ಲ. ಅವರು ಕೇವಲ ಕುರುಬರಿಗೆ ಮಾತ್ರ ಅಕ್ಕಿ ಕೊಟ್ಟಿದ್ದರಾ ? ಒಂದೇ ಸಮುದಾಯಕ್ಕೆ ಸಾಲ ಮನ್ನಾ ಮಾಡಿದ್ದಾರಾ ? ಅದರ ಸೌಲಭ್ಯವನ್ನು ಮೇಲ್ಜಾತಿಯವರೇ ಹೆಚ್ಚು ಪಡೆದುಕೊಂಡಿದ್ದಾರೆ ಎಂದರು.