ವಿದ್ಯುತ್ ತಂತಿ ತಗಲಿ ಕಾರ್ಮಿಕ ಸಾವು
ಕೊಳ್ನಾಡಿನಲ್ಲಿ ಘಟನೆ, ಮತ್ತೋರ್ವ ಗಂಭೀರ
Team Udayavani, Jun 30, 2019, 9:38 AM IST
ವಿಟ್ಲ: ಕೊಳ್ನಾಡು ಗ್ರಾಮದ ಕಲ್ಕಾಜೆಯಲ್ಲಿ ಶನಿವಾರ ಲಾರಿಯಿಂದ ತೆಂಗಿನ ಸಿಪ್ಪೆಯ ಹುಡಿ ಅನ್ಲೋಡ್ ಮಾಡುತ್ತಿದ್ದಾಗ ಕಬ್ಬಿಣದ ಹಾರೆಯು ವಿದ್ಯುತ್ ತಂತಿಗೆ ಸ್ಪರ್ಶವಾಗಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಡಿದ್ದ ಸುಳ್ಯ ತಾಲೂಕಿನ ಪಂಜ ನಿವಾಸಿ ವಾಸುದೇವ ಪ್ರಭು (50) ಅವರು ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರೆಳೆದರು. ಜತೆಗಿದ್ದ ಒರಿಸ್ಸಾ ಮೂಲದ ಸುಜಿತ್ (20) ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಕಾಜೆಯಲ್ಲಿರುವ ನಾರಾಯಣ ನಾಯ್ಕರ ಕೋಳಿ ಫಾರ್ಮಿಗೆ ಬದಿಯಡ್ಕ ಮೂಲದ ಲಾರಿಯಲ್ಲಿ ಕೇರಳದ ನೀಲೇಶ್ವರದಿಂದ ತೆಂಗಿನ ಸಿಪ್ಪೆಯ ಹುಡಿ ತರಲಾಗಿತ್ತು. ಅದನ್ನು ಇಳಿ ಸುತ್ತಿದ್ದಾಗ ವಾಸುದೇವ ಪ್ರಭು ಕೈಯಲ್ಲಿದ್ದ ಕಬ್ಬಿಣದ ಹಾರೆ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗಲಿ ದುರಂತ ಸಂಭವಿಸಿದೆ.
ಸ್ಥಳಕ್ಕೆ ಮೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಸದಸ್ಯ ಪವಿತ್ರ ಪೂಂಜ ಕೊಡಂಗೆ ಹಾಗೂ ಹರೀಶ್ ಮಂಕುಡೆ ತೆರಳಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.