ಆನಂದ್ ಸಿಂಗ್ ದಾರಿ ತಪ್ಪಿದ ಮಗ: ಉಗ್ರಪ್ಪ
Team Udayavani, Jul 5, 2019, 5:03 AM IST
ಬೆಂಗಳೂರು: ‘ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ದಾರಿ ತಪ್ಪಿದ ಮಗ ಆಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಇದುವರೆಗೂ ಮಾತನಾಡದ ಅವರು ಏಕಾಏಕಿ ಈಗ ಧ್ವನಿ ಎತ್ತಿರುವುದೇಕೆ’ ಎಂದು ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಆನಂದ್ ಸಿಂಗ್ ಅವರ ಕ್ಷೇತ್ರದಲ್ಲಿಯೇ ತುಂಗಭದ್ರಾ ಅಣೆಕಟ್ಟೆಯಲ್ಲಿ 33 ಟಿಎಂಸಿ ಹೂಳು ತುಂಬಿಕೊಂಡಿದ್ದು, ಇದರಿಂದ ರೈತರಿಗೆ ನೀರು ದೊರೆಯದಂತಾಗಿದೆ. ನದಿಯಲ್ಲಿನ ಹೂಳು ತೆಗೆಯಲು ಆನಂದ್ ಸಿಂಗ್ ಹೋರಾಟ ಮಾಡಿದ್ದರೆ ಅಲ್ಲಿನ ರೈತರು ಬದುಕಿಕೊಳ್ಳುತ್ತಿದ್ದರು. ಹೊಸಪೇಟೆ, ಕಂಪ್ಲಿ ಸಕ್ಕರೆ ಕಾರ್ಖಾನೆ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಆನಂದ್ ಸಿಂಗ್ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದರು.
ಇದೇ ವೇಳೆ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು, ವಾಲ್ಮೀಕಿ ಸಮಾಜ ಪ್ರಾಮಾಣಿಕತೆ, ಬದ್ಧತೆಗೆ ಹೆಸರುವಾಸಿಯಾಗಿದೆ. ಆ ಸಮಾಜದ ಹೆಸರಿನಲ್ಲಿ ಬ್ಲಾಕ್ವೆುೕಲ್ ಮಾಡಿಕೊಂಡು ಬರುತ್ತಿರುವುದನ್ನು ವಾಲ್ಮೀಕಿ ಸಮಾಜ ಮೆಚ್ಚುವುದಿಲ್ಲ ಎಂದು ಹೇಳಿದರು.