ರಾಜ್ಯಸಭೆ ಬಹುಮತ ಬಂದ ಬಳಿಕ ರಾಮಮಂದಿರ ನಿರ್ಣಯ
Team Udayavani, Jul 5, 2019, 10:19 AM IST
ಮಂಗಳೂರು: ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದ ಅನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರ ಸರಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಂಜುಪ್ರಾಸಾದ ನಿವಾಸದಲ್ಲಿ ಗುರು ವಾರ ನಾಣ್ಯದ ತುಲಾಭಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗುವುದು ಖಚಿತ ಎಂದರು.
ಬೆಂಗಳೂರಿನಲ್ಲಿ ಆಸ್ಪತ್ರೆ
ಪೇಜಾವರ ಮಠದಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಎರಡು ಎಕರೆ ಜಾಗದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಈಗಾಗಲೇ 15 ಕೋಟಿ ರೂ.ಗಳ ಕಾಮಗಾರಿ ನಡೆದಿದ್ದು, ಇನ್ನೂ 10 ಕೋಟಿ ರೂ.ಗಳ ಅವಶ್ಯವಿದೆ ಎಂದು ಶ್ರೀಗಳು ಹೇಳಿದರು.
ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಜಾಗದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣವಾಗಲಿದೆ. ಉಡುಪಿಯಲ್ಲಿಯೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಲಾಗುವುದು. ಹುಬ್ಬಳ್ಳಿಯಲ್ಲಿ ಮಠದಿಂದ ಪಿಯು ಕಾಲೇಜು ನಿರ್ವಹಿಸಲ್ಪಡುತ್ತಿದ್ದು, ಮುಂದೆ 10 ಎಕರೆ ಜಾಗದಲ್ಲಿ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶಾಲೆ ತೆರೆಯುವ ಉ¨ªೇಶ ಇದೆ ಎಂದು ತಿಳಿಸಿದರು.
ಪೇಜಾವರ ಮಠದಿಂದ ಉಡುಪಿಯ ಪಾಜಕದಲ್ಲಿ ಆನಂದತೀರ್ಥ ವಿದ್ಯಾಲಯವನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇನ್ನೂ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರಿಯುತ್ತಿದೆ. ಧಾರ್ಮಿಕ ಶಿಕ್ಷಣ ಕಲಿಯುವ ಇಚ್ಛೆ ಇರುವ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ಕಲ್ಪಿಸುವ ಉದ್ದೇಶದಿಂದ ವಸತಿ ನಿಲಯವೂ ನಿರ್ಮಾಣಗೊಳ್ಳುತ್ತಿದೆ ಎಂದರು.
ಉಪೇಕ್ಷಿತ ಬಂಧುಗಳ ಭೇಟಿ ಮುಂದುವರಿಕೆ
ಈ ಹಿಂದೆ ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡಿದ ಬಳಿಕ ಸಮಾಜದಲ್ಲಿ ಅಸ್ಪ„ಶ್ಯತೆ ನಿವಾರಣೆ ನಿಟ್ಟಿನಲ್ಲಿ ಬಹುದೊಡ್ಡ ಪರಿವರ್ತನೆಯಾಗಿದೆ. ಹಾಗಾಗಿ ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಯಥಾಪ್ರಕಾರ ಮುಂದುವರಿಯಲಿದೆ. ಯಾರಾದರೂ ಉಪೇಕ್ಷಿತ ಬಂಧುಗಳು ಕರೆದಲ್ಲಿ ತಾನು ಹೋಗಲು ಸಿದ್ಧನಿದ್ದೇನೆ ಎಂದು ಸ್ವಾಮೀಜಿ ತಿಳಿಸಿದರು.
5 ಕೋಟಿ ರೂ. ವೆಚ್ಚದಲ್ಲಿ ಕೃಷ್ಣ ಮಂದಿರ
ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿ ಹಾಲಿ ಇರುವ ಶ್ರೀಕೃಷ್ಣ ಕಲ್ಯಾಣ ಮಂಟಪವನ್ನು ಕೆಡವಿ 5 ಕೋಟಿ ರೂ. ವೆಚ್ಚದಲ್ಲಿ ಹೊಸ ಶ್ರೀ ಕೃಷ್ಣ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜು. 11ರಂದು ಬೆಳಗ್ಗೆ 9 ಗಂಟೆಗೆ ಶಿಲಾನ್ಯಾಸ ನಡೆಯಲಿದೆ ಎಂದು ಪೇಜಾವರ ಶ್ರೀ ಹೇಳಿದರು.
ಕೇಂದ್ರ ಬಜೆಟ್ನಿಂದ ನಿಮ್ಮ ಅಪೇಕ್ಷೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಮಠಾಧೀಶರು, ನಿರುದ್ಯೋಗ ನಿವಾರಣೆಗೆ ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ದೇಶದಲ್ಲಿ ಗೋಹತ್ಯೆ ನಿಷೇಧಕ್ಕೆ ಕಠಿನ ಕ್ರಮದ ಭರವಸೆ, ಜನಕಲ್ಯಾಣ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಹಮ್ಮಿಕೊಳ್ಳಬೇಕು ಎಂದರು.
ಸುಬ್ರಹ್ಮಣ್ಯ ವಿವಾದ: ಮಾತುಕತೆ ಇನ್ನೂ ಆಗಿಲ್ಲ
ಉಡುಪಿ: ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠಗಳ ವಿವಾದಕ್ಕೆ ಸಂಬಂಧಿಸಿ ಇನ್ನೂ ಮಾತುಕತೆ ನಡೆದಿಲ್ಲ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ಬೇರೆ ಕಾರಣಗಳಿಗಾಗಿ ಸಮಯವಾಗಲಿಲ್ಲ. ಸುಬ್ರಹ್ಮಣ್ಯ ಸ್ವಾಮೀಜಿ ಅವರು ಸಂಚಾರದಲ್ಲಿದ್ದಾರೆ. ಹೀಗಾಗಿ ಮಾತುಕತೆ ನಡೆದಿಲ್ಲ. ದೇವಸ್ಥಾನದವರು ಹಾಕಿದ ಕೆಲವು ಷರತ್ತುಗಳ ಬಗೆಗೆ ಸ್ವಾಮೀಜಿ ಯವರಲ್ಲಿ ಮಾತನಾಡಿ ಎರಡೂ ಕಡೆಯವರಲ್ಲಿ ಚರ್ಚಿಸಬೇಕಾಗಿದೆ. ಸುಬ್ರಹ್ಮಣ್ಯ ಮಠದ ಹೆಸರನ್ನು ಬದಲಾಯಿಸಬೇಕು, ಸರ್ಪಸಂಸ್ಕಾರ ಸೇವೆಯನ್ನು ಮಠದಲ್ಲಿ ಮಾಡಕೂಡದು ಎಂಬಿತ್ಯಾದಿ ಷರತ್ತುಗಳಿವೆ.
ಸರ್ಪಸಂಸ್ಕಾರವನ್ನು ಮನೆಗಳಲ್ಲಿಯೂ ಮಾಡುತ್ತಾರೆ. ಆದ್ದರಿಂದ ಬೇರೆಲ್ಲೂ ಮಾಡುವುದು ಬೇಡ ಎನ್ನಲಾಗದು. ದೇವಸ್ಥಾನ ಮತ್ತು ಮಠದ ಸೇವೆ ಪ್ರತ್ಯೇಕ ಎಂದು ತೋರಿಸಿದರೆ ಆಗಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದ್ದೇನೆ. ಇಬ್ಬರ ನಡುವೆ ಮಾತುಕತೆ ನಡೆಸಿ ಇತ್ಯರ್ಥಕ್ಕೆ ಬರಬೇಕಾಗಿದೆ ಎಂದು ಶ್ರೀಪಾದರು ತಿಳಿಸಿದ್ದಾರೆ.