ಸವಾಲು ಎದುರಿಸಲು ಸನ್ನದ್ಧರಾಗಿ: ಸಂಸದ
Team Udayavani, Jul 8, 2019, 3:00 AM IST
ಮೈಸೂರು: ಇಂದಿನ ತಂತ್ರಜ್ಞಾನ ಯುಗದಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಕಲಾಮಂದಿರದಲ್ಲಿ ಭಾನುವಾರ ಬೇಸ್ ಪ್ರಿಯೂನಿವರ್ಸಿಟಿ ಕಾಲೇಜಿನ ವಾರ್ಷಿಕ ಸಾಧಕರ ಸಭೆಯಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನವು ಇಂದು ಬಹುಬೇಗನೆ ಅಭಿವೃದ್ಧಿ ಹೊಂದುತ್ತಿದ್ದು, ಹೊಸ ಹೊಸ ಸವಾಲು ಅಷ್ಟೇ ಇವೆ. ಜೊತೆಗೆ ಇಂದು ರೋಗಗಳು ಮತ್ತು ರೋಬೊಟಿಕ್ಸ್ ತಂತ್ರಜ್ಞಾನ ಎರಡೂ ಬಹಳ ಬೇಗ ಬೆಳೆಯುತ್ತಿದೆ. ಹೊಸ ವಿದ್ಯಾರ್ಥಿಗಳು ಇಂದಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮತ್ತು ಯಶಸ್ವಿಯಾಗಲು ಶ್ರಮಿಸಬೇಕು. ಶಿಕ್ಷಣವು ಇಂದು ಯಶಸ್ಸು ಮತ್ತು ಸಮೃದ್ಧಿಗೆ ಸುಲಭವಾದ ಮಾರ್ಗವಾಗಿದೆ. ಒಮ್ಮೆ ನೀವು ಶಿಕ್ಷಣ ಪಡೆದರೆ, ಹಣ ಮತ್ತು ಶಕ್ತಿ ಸೇರಿದಂತೆ ಎಲ್ಲವೂ ನಿಮ್ಮನ್ನು ಅನುಸರಿಸುತ್ತದೆ ಎಂದು ಹೇಳಿದರು.
ಸಾಮಾಜಿಕ ಸೇವೆ ಮಾಡಲು ನಿಮಗೆ ಬೇಕಾದ ಆರ್ಥಿಕ ಸ್ವಾತಂತ್ರ್ಯವನ್ನು ಶಿಕ್ಷಣ ಒದಗಿಸುತ್ತದೆ. ನಾವು ಬದುಕಿದಷ್ಟು ದಿನವೂ ಅರ್ಥಪೂರ್ಣ ಜೀವನ ಸಾಧಿಸಲು ಶ್ರಮಿಸಬೇಕು. ಸ್ವಾಮಿ ವಿವೇಕಾನಂದರು ಕೇವಲ 39 ವರ್ಷಗಳವರೆಗೆ ಬದುಕಿದ್ದರು. ಆದರೆ, ಈಗಲೂ ಅವರು ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಬೋಧನೆಯ ಬಗ್ಗೆ ಚರ್ಚೆ ಮತ್ತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಎಫ್ಟಿಆರ್ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್, ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯ ಸಹಾಯಕ ಪ್ರಾಧ್ಯಾಪಕ ಮತ್ತು ಯುನಿಟ್ನ ಮುಖ್ಯಸ್ಥ ಡಾ.ಕೆ.ಎಸ್. ಸದಾನಂದ, ಬೇಸ್ ಪಿಯು ಕಾಲೇಜಿನ ಸಂಸ್ಥಾಪಕ ಡಾ.ಎಚ್.ಎಸ್. ನಾಗರಾಜ, ಕಾರ್ಯನಿರ್ವಹಕ ನಿರ್ದೇಶಕ ಅನಂತಕುಮಾರ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.