ಸಚಿವ ರೇವಣ್ಣ ಕಾರುಬಾರು: ಎಂಜಿನಿಯರ್ಗಳ ಭರ್ಜರಿ ವರ್ಗ
Team Udayavani, Jul 10, 2019, 3:00 AM IST
ಬೆಂಗಳೂರು: ಮುಖ್ಯಮಂತ್ರಿಯವರು ಸೋಮವಾರ ಸಚಿವರಿಂದ ಸಾಮೂಹಿಕ ರಾಜೀನಾಮೆ ಪಡೆದ ಬೆನ್ನಲ್ಲೇ “ಸೂಪರ್ಸಿಎಂ’ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ತಮ್ಮ ಇಲಾಖೆಯ ಕಿರಿಯ ಹಾಗೂ ಸಹಾಯಕ ಎಂಜಿನಿಯರ್ಗಳ ವರ್ಗಾವಣೆ ಹಾಗೂ ಬಡ್ತಿ ನೀಡಿರುವುದು ವಿವಾದದ ಸ್ವರೂಪ ಪಡೆದಿದೆ.
99 ಕಿರಿಯ ಹಾಗೂ ಸಹಾಯಕ ಎಂಜಿನಿಯರುಗಳು, 46 ಕಾರ್ಯಪಾಲಕ ಎಂಜಿನಿಯರುಗಳು, 109 ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳು ಸೇರಿ ನೂರಾರು ಎಂಜಿನಿಯರುಗಳ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಾಸಕರು ಶಿಫಾರಸು ಪತ್ರ ನೀಡಿದ್ದರು. ಆದರೆ, ಅದ್ಯಾವುದಕ್ಕೂ ಪರಿಗಣಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸೋಮವಾರ ಮುಖ್ಯಮಂತ್ರಿಯವರು ಎಚ್.ಡಿ.ರೇವಣ್ಣ ಸಹಿತ ಜೆಡಿಎಸ್ನ ಎಲ್ಲ ಸಚಿವರಿಂದ ಸಾಮೂಹಿಕ ರಾಜೀನಾಮೆ ಪಡೆದಿದ್ದರು. ಆದಾದ ನಂತರ ರೇವಣ್ಣ ತಮ್ಮ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ನಂತರ ಹಿರಿಯ ಅಧಿಕಾರಿಗಳು ತಡರಾತ್ರಿವರೆಗೂ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕುಳಿತು ಎಂಜಿನಿಯರುಗಳ ವರ್ಗಾವಣೆ ಪಟ್ಟಿ ಸಿದ್ಧಪಡಿಸಿ ಆದೇಶ ಹೊರಡಿಸಿದ್ದಾರೆ. ಕೆಲವು ಆದೇಶಗಳನ್ನು ಹಿಂದಿನ ದಿನಾಂಕ ನಮೂದಿಸಿ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಸಚಿವರ ಪಾತ್ರವಿಲ್ಲ ಎಂದ ಅಧಿಕಾರಿಗಳು: ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ವರ್ಗಾವಣೆ, ಬಡ್ತಿ ನಿರಂತರ ಪ್ರಕ್ರಿಯೆ. ಇದು ಮೊದಲೇ ತೀರ್ಮಾನವಾಗಿತ್ತು. ಆದೇಶ ಹೊರಬಿದ್ದಿದೆಯಷ್ಟೇ. ಇದಕ್ಕೂ ಸಚಿವ ರೇವಣ್ಣ ಅವರಿಗೆ ಸಂಬಂಧವಿಲ್ಲ, ಅವರ ಪಾತ್ರವೂ ಇಲ್ಲ ಎಂದು ತಿಳಿಸಿದ್ದಾರೆ.