ಬೆಳ್ತಂಗಡಿ: ದುರಸ್ತಿಯಾಗದ ಬಹುತೇಕ ಚರಂಡಿಗಳು
Team Udayavani, Jul 11, 2019, 5:00 AM IST
ಬೆಳ್ತಂಗಡಿ: ಮಳೆಗಾಲ ಎದುರಿಸಲು ಇಲಾಖೆ ಸನ್ನದ್ಧವಾಗಿದೆ ಎಂಬ ಮಳೆಗಾಲ ಪೂರ್ವ ಅಧಿಕಾರಿಗಳ ಉತ್ತರ ಪ್ರಸ್ತುತ ಯಾವ ಮಟ್ಟಕ್ಕೆ ಎಂಬುದು ರಸ್ತೆಯಲ್ಲಿ ಹರಿವ ಕೃತಕ ನೆರೆಗೆ ಸಾಕ್ಷಿಯಾಗಿದೆ.
ರಸ್ತೆಯಲ್ಲೇ ಕೆಸರು ನೀರು
ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ, ಉಜಿರೆಯಿಂದ- ಬೆಳ್ತಂಗಡಿ ರಸ್ತೆ ಸೇರಿದಂತೆ ನಗರ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಚರಂಡಿಗಳ ಹೂಳು ಎತ್ತದೆ ರಸ್ತೆಯಲ್ಲೇ ಕೆಸರು ನೀರು ಆವರಿಸುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನ.ಪಂ. ವ್ಯಾಪ್ತಿ ಹಾಗೂ ಮುಖ್ಯ ರಸ್ತೆ ಚರಂಡಿ ಹೂಳೆತ್ತಲು 7 ಲಕ್ಷ ರೂ. ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆಯೂ ಮುಗಿದಿತ್ತು. ಆದರೆ ಮಳೆ ಆರಂಭವಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ನೀರು ರಸ್ತೆಯಲ್ಲಿ ಹರಿದು ಈಗಿರುವ ರಸ್ತೆಗಳು ಹೊಂಡ ಬೀಳುವ ಸಾಧ್ಯತೆ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗುರು ವಾಯನಕೆರೆ ಹೊಸಂಗಡಿ, ವೇಣೂರು, ನಾರಾವಿ ಉಜಿರೆಯಿಂದ ಕೊಕ್ಕಡ ರಸ್ತೆ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ. ಆದರೆ ಪ್ರಸ್ತುತ ಒಂದು ತಾಸು ಮಳೆ ಸುರಿದಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆ, ಗುರುವಾಯನಕೆರೆ- ಬೆಳ್ತಂಗಡಿ, ಬೆಳ್ತಂಗಡಿ- ಉಜಿರೆ, ಗುರುವಾಯನಕೆರೆ- ನಾರಾವಿ ಬಹುತೇಕ ಎಲ್ಲ ರಸ್ತೆಗಳಲ್ಲಿ ಕೆಸರು ನೀರು ಹರಿ ಯುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾ ಗುತ್ತಿದೆ ಎಂಬುದು ವಾಹನ ಸವಾರರ ಸಮಸ್ಯೆ.
ಉಜಿರೆಯಲ್ಲಿ ರಸ್ತೆ ನದಿರೂಪ
ಮಂಗಳವಾರ ಸುರಿದ ಮಳೆಗೆ ಉಜಿರೆ ಮುಖ್ಯರಸ್ತೆ ಬೆಳಾಲು ಕ್ರಾಸ್ ಸಮೀಪ ಚರಂಡಿ ಕಟ್ಟಿದ್ದರಿಂದ ರಸ್ತೆಯಲ್ಲಿ ಒಂದಡಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.