ಕೇರಳ ಮಾದರಿಯಲ್ಲೇ ಮೀನುಗಾರಿಕೆ ಕಾಯ್ದೆಗೆ ತಿದ್ದುಪಡಿ: ರಾಮಕೃಷ್ಣ
Team Udayavani, Jul 26, 2019, 5:00 AM IST
ಮಹಾನಗರ: ರಾಜ್ಯದಲ್ಲಿ ಸುಸ್ಥಿರ ಮೀನುಗಾರಿಕಾ ಅಭಿವೃದ್ಧಿ ಉದ್ದೇಶದಿಂದ ಕೇರಳ ಮಾದರಿಯಲ್ಲೇ “ಕರ್ನಾಟಕ ಸಾಗರ ಮೀನುಗಾರಿಕಾ ಕಾಯ್ದೆ 1986’ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಇದನ್ನು ಅನುಷ್ಠಾನಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಕೃಷ್ಣ ತಿಳಿಸಿದರು.
ಏಷಿಯನ್ ಫಿಶರೀಸ್ ಸೊಸೈಟಿ ಭಾರತೀಯ ಶಾಖೆಯ ಆಶ್ರಯದಲ್ಲಿ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಲಾದ “ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೀನುಗಾರಿಕೆಯನ್ನು ಉಳಿಸುವ ನೆಲೆಯಲ್ಲಿ ಕಡಲ ತೀರದಿಂದ 12 ನಾಟಿಕಲ್ ಮೈಲಿವರೆಗೆ ಮೀನುಗಾರಿಕೆ ನಡೆಸಲು ಆಯಾ ರಾಜ್ಯ ವ್ಯಾಪಿಯಾಗಿ ನಿಯಮಾವಳಿ ಇದೆ. ಆದರೆ ಅಲ್ಲಿಂದ 200 ನಾಟಿಕಲ್ ಮೈಲಿವರೆಗೆ ರಾಷ್ಟ್ರೀಯ ವ್ಯಾಪ್ತಿ ಇರುವಲ್ಲಿ ಯಾವುದೇ ಸೂಕ್ತ ನಿಯಮಾವಳಿ ಇರಲಿಲ್ಲ. ಹೀಗಾಗಿ ಕೇಂದ್ರ ಸರಕಾರವೂ ಮೀನುಗಾರಿಕೆ ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ನಿಯಮಾವಳಿ ರಚಿಸಲು ಮುಂದಾಗಿದೆ ಎಂದರು.
ಕಡಲು ಅಕ್ಷಯ ಪಾತ್ರೆಯಲ್ಲ
ಕಡಲು ಅಕ್ಷಯಪಾತ್ರೆಯಲ್ಲ. ಬಗೆದಷ್ಟು ಮೀನುಗಳು ಸಿಗುವ ಬಗ್ಗೆ ಮಾತ್ರ ಯೋಚಿಸಿದರೆ, ಮುಂದಿನ ದಿನಗಳಲ್ಲಿ ಮೀನುಗಾರಿಕೆ ಕಷ್ಟವಾಗಬಹುದು. ಹೀಗಾಗಿ ಅದನ್ನು ಉಳಿಸುವ ಜವಾಬ್ದಾರಿ ಮೀನುಗಾರರದ್ದಾಗಿದೆ. ಇದಕ್ಕೆಲ್ಲ ಸೂಕ್ತ ನಿಯಮದ ಚೌಕಟ್ಟಿರಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಕೇರಳದಲ್ಲಿ ಜಾರಿಯಲ್ಲಿರುವ ಕಾಯ್ದೆಗೆ ವಿಶೇಷ ತಿದ್ದುಪಡಿ ತಂದು ಕಟ್ಟುನಿಟ್ಟು ಮಾಡಲಾಗಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ಕೆಲವು ತಿದ್ದುಪಡಿಯನ್ನು ಪ್ರಸ್ತಾವಿಸಲಾಗಿದ್ದು, ಕೆಲವೇ ತಿಂಗಳಿನಲ್ಲಿ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.
ದೇಶದಲ್ಲೇ ಅತಿ ಹೆಚ್ಚಿನ ಸಹಾಯ ಧನವನ್ನು ಕರ್ನಾಟಕದ ಮೀನುಗಾರರು ಕಳೆದ ಸಾಲಿನಲ್ಲಿ ಪಡೆದಿದ್ದಾರೆ. ಒಟ್ಟ 248 ಕೋಟಿ ರೂ. ಸಬ್ಸಿಡಿ ನೀಡಿರುವುದರಲ್ಲಿ 140 ಕೋಟಿ ರೂ. ಡೀಸೆಲ್ ಸಬ್ಸಿಡಿಯಾಗಿಯೇ ನೀಡಲಾಗಿದೆ.
ಬುಲ್ಟ್ರಾಲ್ನಂತಹ ಮೀನು ಸಂತತಿಗೇ ಮಾರಕವಾಗುವ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದ್ದರೂ ಅದರ ಅನುಷ್ಠಾನ ಮಾಡುವುದು ಸವಾಲಿನ ಕೆಲಸವಾಗಿದೆ. ಲೈಟ್ಫಿಶಿಂಗ್ ಕ್ರಮವೂ ಮೀನುಗಾರಿಕೆಗೆ ಮಾರಕ ಎಂದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಉದ್ಘಾಟಿಸಿದರು. ಮೀನುಗಾರಿಕಾ ಕಾಲೇ ಜಿನ ಡೀನ್ ಡಾ| ಎ. ಸೆಂಥಿಲ್ ವೇಲ್ ಮುಖ್ಯ ಅತಿಥಿತಾಗಿದ್ದರು. ಏಶ್ಯನ್ ಮೀನು
ಗಾರಿಕಾ ಸೊಸೈಟಿ ಕಾರ್ಯದರ್ಶಿ ಡಾ| ಪಿ. ಕೇಶವನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಡಾ| ಬಿ.ಎ. ಶ್ಯಾಮಸುಂದರ್ ಉಪಸ್ಥಿತರಿ ದ್ದರು. ಮೀನುಗಾರಿಕಾ ಕಾಲೇಜು ಉಪ ನ್ಯಾಸಕ ಡಾ| ಎಸ್.ಎಂ. ಶಿವಪ್ರಕಾಶ್ ವಂದಿ ಸಿದರು. ಡಾ| ಮೃದುಲಾ ನಿರೂಪಿಸಿದರು.
“ಸಮುದ್ರ ಮಾಲಿನ್ಯ; ಮೀನುಗಾರಿಕೆಗೆ ನಿರಾಶೆ’
ಮೀನುಗಾರಿಕಾ ಕಾಲೇಜಿನ ಡೀನ್ ಡಾ| ಎ. ಸೆಂಥಿಲ್ ವೇಲ್ ಮಾತ ನಾಡಿ, ಸಾಗರ ಮೀನುಗಾರಿಕೆ ವಿಷಯದಲ್ಲಿ ಬಹಳ ನಿರಾಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ. ಇದಕ್ಕೆ ಸಮುದ್ರವನ್ನು ಬಾಧಿಸುವ ಮಾಲಿನ್ಯ ಕಾರಣವಾಗಿದೆ. ಕಾನೂನುಬಾಹಿರ, ಅನಿಯಂತ್ರಿತ ಮೀನುಗಾರಿಕೆಯಿಂದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕಡಲಿನ ಸಂಪನ್ಮೂಲಗಳನ್ನು ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕು. ಈ ಉದ್ದೇಶದಿಂದಾಗಿ ಏಷ್ಯನ್ ಮೀನುಗಾರಿಕಾ ಸೊಸೈಟಿ ಕಡಲ ಮೀನುಗಾರಿಕೆ ಸುಧಾರಣೆ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.