ಹಿರ್ಗಾನ: ರಾಜ್ಯ ಹೆದ್ದಾರಿ ಅಂಚಿನಲ್ಲಿಯೇ ತ್ಯಾಜ್ಯ ರಾಶಿ!
Team Udayavani, Jul 29, 2019, 5:53 AM IST
ಅಜೆಕಾರು: ಹಿರ್ಗಾನ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿಯೇ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳ ರಾಶಿ ಬಿದ್ದಿದೆ.
ಹಿರ್ಗಾನ ಪಂಚಾಯತ್ ವ್ಯಾಪ್ತಿಯ ದುರ್ಗಾ ನಗರ ಬಳಿಯ ಜನವಸತಿ ಪ್ರದೇಶದಲ್ಲಿಯೇ ತ್ಯಾಜ್ಯ ರಾಶಿ ಬಿದ್ದಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ತ್ಯಾಜ್ಯ ರಾಶಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತೆಂಗಿನ ಚಿಪ್ಪುಗಳು, ಗಾಜಿನ ಬಾಟಲಿಗಳು ಸೇರಿಕೊಂಡಿದ್ದು ಇದರಲ್ಲಿ ಮಳೆ ನೀರು ಶೇಖರಣೆಗೊಂಡು ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುವ ಸಂಭವವಿದೆ.
ಪಂಚಾಯತ್ ಆಡಳಿತ ಹಲವು ಬಾರಿ ಈ ಪ್ರದೇಶದ ತ್ಯಾಜ್ಯವನ್ನು ವಿಲೇವಾರಿ ಮಾಡಿದೆಯಾದರೂ ಕೆಲ ವ್ಯಕ್ತಿಗಳು ಮನೆಯ ತ್ಯಾಜ್ಯವನ್ನು ಇಲ್ಲಿಯೇ ತಂದು ಸುರಿಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.