ಐಎಂಎ: ಜಮೀರ್ ಅಹಮದ್ ವಿಚಾರಣೆ
Team Udayavani, Aug 1, 2019, 3:03 AM IST
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹಮದ್ ಬುಧವಾರ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದು, ಸತತ ಒಂಬತ್ತೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಅರಮನೆ ರಸ್ತೆಯಲ್ಲಿರುವ ಸಿಐಡಿ ಆವರಣದಲ್ಲಿರುವ ಎಸ್ಐಟಿ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ ಜಮೀರ್ ಅಹಮದ್ರನ್ನು ರಾತ್ರಿ 8.30ರವರೆಗೆ ವಿಚಾರಣೆ ನಡೆಸಲಾಗಿದೆ. ಈ ವೇಳೆ ಮನ್ಸೂರ್ ಖಾನ್ಗೆ ಆಸ್ತಿ ಮಾರಾಟ ಮಾಡಿದ್ದ ಕುರಿತು ವಿಚಾರವಾಗಿ ಪ್ರಶ್ನಿಸಲಾಯಿತು.
ಜತೆಗೆ ಆತ ಹೇಗೆ ಪರಿಚಿತನಾದ? ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವ ವಿಚಾರ ತಮ್ಮ ಗಮನಕ್ಕೆ ಇರಲಿಲ್ಲವೇ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲದಕ್ಕೂ ಅವರು ಸಮರ್ಪಕವಾಗಿ ಉತ್ತರಿಸಿದ್ದಾರೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಮೀರ್, ಮನ್ಸೂರ್ ಖಾನ್ಗೂ ತಮಗೂ ಯಾವುದೇ ಸಂಬಂಧ ಇಲ್ಲ. ನಿವೇಶನ ಮಾರಾಟ ವಿಚಾರವಾಗಿ ಪರಿಚಯವಾಗಿದ್ದು, ಹೊರತುಪಡಿಸಿ ಆತನ ಬಗ್ಗೆ ಬೇರೆ ಯಾವುದೇ ಮಾಹಿತಿ ಇಲ್ಲ. ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸೂಕ್ತ ಉತ್ತರ ನೀಡಿದ್ದೇನೆ.
ನಗರದಲ್ಲಿರುವ ಆಸ್ತಿ ಮಾರಾಟ ಸಂಬಂಧ 2017ರಲ್ಲಿ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಸೈಯದ್ ಮುಜಾಯಿದ್(ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ) ಮೂಲಕ ಮನ್ಸೂರ್ ಖಾನ್ ಪರಿಚಯವಾಗಿದ್ದ. 2009ರಲ್ಲಿ ಖರೀದಿಸಿದ್ದ ಆಸ್ತಿಯನ್ನು 9.38 ಕೋಟಿ ರೂ.ಗೆ ಮಾರಾಟ ಮಾಡಿ 5 ಕೋಟಿ ರೂ. ಲಾಭಗಳಿಸಿದ್ದೇನೆ.
ಮನ್ಸೂರ್ ಖಾನ್ನನ್ನು ನಾಲ್ಕೈದು ಬಾರಿ ಮಾತ್ರ ಭೇಟಿಯಾಗಿದ್ದೇನೆ. ಇಫ್ತಿಯಾರ್ ಕೂಟಕ್ಕೆ ಕರೆದಾಗ ಹೋಗಿದ್ದಾನೆ ಅಷ್ಟೆ. ಆಸ್ತಿ ಮಾರಾಟ ಮಾಡಿದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ. ಮತ್ತೂಮ್ಮೆ ವಿಚಾರಣೆಗೆ ಕರೆದರೆ ಖಂಡಿತ ಬರುತ್ತೇನೆ ಎಂದು ಹೇಳಿದರು.
ರೋಷನ್ ಬೇಗ್ ಗೈರು: ಅನರ್ಹ ಶಾಸಕ ಆರ್.ರೋಷನ್ ಬೇಗ್ ಮತ್ತೂಮ್ಮೆ ಎಸ್ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನಾಲ್ಕು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಅನಗತ್ಯ ಸಬೂಬುಗಳನ್ನು ನೀಡಿ ಗೈರಾಗುತ್ತಿದ್ದಾರೆ.
ಬುಧವಾರ ಕೂಡ ಮತ್ತೂಮ್ಮೆ ವಿಚಾರಣೆಗೆ ಬರದೆ ಅನಾರೋಗ್ಯ ಕಾರಣ ನೀಡಿ ಒಂದು ವಾರಗಳ ಕಾಲವಕಾಶ ಕೋರಿದ್ದಾರೆ. ಹೀಗಾಗಿ ಮತ್ತೂಂದು ನೋಟಿಸ್ ಜಾರಿ ಮಾಡಿ, ದಿನಾಂಕ ನಿಗದಿ ಮಾಡಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.