ಬೆಳ್ಮಣ್ ಜಂತ್ರ ರುದ್ರಭೂಮಿ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ
ಬೆಳ್ಮಣ್ ಜಂತ್ರ ರುದ್ರಭೂಮಿ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ; ಅಪಾಯಕಾರಿ ಗುಂಡಿಗಳನ್ನು ಮುಚ್ಚಲು ಆಗ್ರಹ
Team Udayavani, Aug 2, 2019, 5:08 AM IST
ಬೆಳ್ಮಣ್: ಜಂತ್ರದಲ್ಲಿರುವ ಬೆಳ್ಮಣ್ ಗ್ರಾ.ಪಂ.ನ ಹಿಂದೂ ರುದ್ರಭೂಮಿಗೆ ಸಾಗುವ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿಗಳಿದ್ದು ಅಪಾಯಕಾರಿಯಾಗಿವೆ. ಸಂಪರ್ಕ ರಸ್ತೆಯ ಅಕ್ಕಪಕ್ಕದಲ್ಲಿ ಗುಂಡಿಗಳಿರುವುದರಿಂದ ರುದ್ರಭೂಮಿಗೆ ಬರುವವರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಕಲ್ಲಿನ ಕೋರೆಯ ಗುಂಡಿ
ರುದ್ರಭೂಮಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲೇ ಇದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಂಪು ಕಲ್ಲಿನ ಕೋರೆಯ ಮಧ್ಯೆ ಇದೆ. ಇದರಿಂದ ರಸ್ತೆ ಅಕ್ಕಪಕ್ಕದಲ್ಲಿ
ಗುಂಡಿಯಿದೆ. ರಸ್ತೆಗೆ ತಡೆಗೋಡೆಯೂ ಇಲ್ಲದಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ.
ನಿರ್ಲಕ್ಷ ಬಗ್ಗೆ ಆಕ್ಷೇಪ
ಹಿಂದು ರುದ್ರಭೂಮಿಯನ್ನು ಬೆಳ್ಮಣ್ ರೋಟರಿ ಕ್ಲಬ್ ನವೀಕರಿಸಲಾದ್ದು, ಇದ ವೇಳೆ ಪಂಚಾಯತ್ ಆಡಳಿತ ಮನಸ್ಸು ಮಾಡಿದ್ದರೆ, ಗುಂಡಿಗಳನ್ನೂ ಮುಚ್ಚಬಹುದಿತ್ತು. ಆದರೆ ಆಡಳಿತ ಗಮನ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೂಡಲೇ ಪಂಚಾಯತ್ ಈ ಬಗ್ಗೆ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದ್ದಾರೆ.
ತುರ್ತಾಗಿ ಗುಂಡಿಯನ್ನು ಮುಚ್ಚಿಸಿ
ಬೆಳ್ಮಣ್ ಶ್ಮಶಾನ ರಸ್ತೆಯ ಇಕ್ಕೆಲಗಳಲ್ಲಿ ಆತಂಕ ಹುಟ್ಟಿಸುವ ಗುಂಡಿಯನ್ನು ಮುಚ್ಚುವ ಕೆಲಸ ಪಂಚಾಯತ್ ವತಿಯಿಂದ ಕೂಡಲೇ ನಡೆಯಬೇಕಾಗಿದೆ.
-ರಘುನಾಥ ನಾಯಕ್ ಪುನಾರು,
ಸ್ಥಳೀಯರು
ಸಭೆಯಲ್ಲಿ ಚರ್ಚಿಸುತ್ತೇವೆ
ಈ ಬಗ್ಗೆ ಪಂಚಾಯತ್ನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ವಾರಿಜಾ,
ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ