ಹನುಮಂತನಗರ ರಸ್ತೆ ಕೊಳಚೆಮಯ: ಜನಜೀವನ ಅಯೋಮಯ
ರಸ್ತೆಯಲ್ಲಿ ಡ್ರೈನೇಜ್ ಕೊಳಚೆ ನೀರು; ದುರಸ್ತಿ ಮಾಡದ ಸ್ಥಳೀಯಾಡಳಿತ
Team Udayavani, Aug 2, 2019, 5:39 AM IST
ಉಡುಪಿ: ಕಲ್ಸಂಕ-ಅಂಬಾಗಿಲು ಮಾರ್ಗ ವಾದ ಸಿಲಾಸ್ ಇಂಟರ್ ನ್ಯಾಶನಲ್ ಶಾಲೆಯ ಹಿಂಭಾಗದ ಡ್ರೈನೇಜ್ ಕೊಳಚೆ ನೀರು ಹೊರಗೆ ಬರಲು ಪ್ರಾರಂಭವಾಗಿ ವಾರ ಕಳೆದರೂ ಇದುವರೆಗೆ ದುರಸ್ತಿ ಭಾಗ್ಯ ದೊರಕಿಲ್ಲ. ಶಾಲೆ ಎದುರುಗಡೆ ಸಮಸ್ಯೆಗಳು ಉಲ್ಬಣವಾದರೂ ಯಾರೊಬ್ಬರು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.
ನಿರ್ಲಕ್ಷ್ಯ ಸಲ್ಲದು
ಕೊಳೆಚೆ ನೀರು ರಸ್ತೆಯಲ್ಲಿ ಹರಿಯು ವುದರಿಂದಾಗಿ ಪರಿಸರವೆಲ್ಲ ಗಬ್ಬು ನಾರುತ್ತಿದೆ. ಇದರತ್ತ ಗಮನ ಹರಿಸುವ ಪುರುಸೋತ್ತು ನಗರ ಸಭೆಯ ಅಧಿಕಾರಿಗಳಿಗೆ ಇಲ್ಲವಾಗಿದೆ. ಇದೇ ಮಾರ್ಗದಲ್ಲಿ ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿತ್ಯ ನರಕ ಯಾತನೆ
ಸಿಲಾಸ್ ಹಾಗೂ ನಿಟ್ಟೂರು ಶಾಲೆ ಸೇರಿಂತೆ ವಿವಿಧ ಶಾಲೆಗೆ ಹೋಗುವ ಮಕ್ಕಳು ಈ ಕೊಳಚೆ ನೀರು ದಾಟಿ ಹೋಗಬೇಕು. ಹೀಗಾಗಿ ಪ್ರತಿನಿತ್ಯ ನರಕಯಾತನೆ ಪಡುವಂತಾಗಿದೆ. ದ್ವಿಚಕ್ರ ವಾಹನ ಸವಾರರಿಗೂ ಇದರಿಂದ ತೊಂದರೆ ಆಗುತ್ತಿದ್ದು ಹಲವು ಬಾರಿ ಜಾರಿ ಬಿದ್ದ ಘಟನೆಗಳೂ ನಡೆದಿವೆ. ರಸ್ತೆಯ ತುಂಬ ಚರಂಡಿಯ ನೀರು ಹರಡಿರುವುದರಿಂದಾಗಿ ಜನಜೀವನ ಅಯೋಮಯವಾಗಿದೆ.
ಶೀಘ್ರವಾಗಿ ದುರಸ್ತಿಗೊಳಿಸಿ
ಸುಮಾರು ಒಂದು ವಾರವಾದರೂ ಡ್ರೈನೇಜ್ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಕೈ ಹಾಕಿಲ್ಲ. ಇದರಿಂದಾಗಿ ಜನರು ಪರದಾಡುತ್ತಿದ್ದಾರೆ. ಶೀಘ್ರವಾಗಿ ನಗರಸಭೆ ಅವ್ಯವಸ್ಥೆಯನ್ನು ಮನಗಂಡು ದುರಸ್ತಿಗೆ ಮುಂದಾಗ ಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದುರಸ್ತಿಗೆ ಮುಂದಾಗಿಲ್ಲ
ಕಳೆದೊಂದು ವಾರದಿಂದ ಡ್ರೈನೇಜ್ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಪಾದಚಾರಿಗಳು ಈ ಮಾರ್ಗದಲ್ಲಿ ತಿರುಗಾಡಲು ಕಷ್ಟ ಪಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದೇ ಮಾರ್ಗವಾಗಿ ಸಂಚರಿಸಿದರೂ ಇಲ್ಲಿಯವರೆಗೆ ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ.
-ವಿದ್ಯಾ, ಸ್ಥಳೀಯರು.
ಯಾವುದೇ ದೂರು ಬಂದಿಲ್ಲ
ಡ್ರೈನೇಜ್ನಿಂದ ಕೊಳಚೆ ನೀರು ಹೊರಗೆ ಬರು ತ್ತಿರುವ ಕುರಿತು ಸ್ಥಳೀಯರಿಂದ ಯಾವುದೇ ದೂರುಗಳು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.
-ಜಯಂತಿ ಕೆ., ಸುಬ್ರಹ್ಮಣ್ಯ ನಗರ ವಾರ್ಡ್ ಸದಸ್ಯೆ, ಉಡುಪಿ.