ಪ್ರತಿ ಲೀ. ಹಾಲಿಗೆ 1.50 ರೂ. ಹೆಚ್ಚಳ
ಹಾಲು ಉತ್ಪಾದಕರಿಗೆ ತುಮುಲ್ ಕೊಡುಗೆ • ಅಧ್ಯಕ್ಷ ಮಹಾಲಿಂಗಯ್ಯ ಘೋಷಣೆ
Team Udayavani, Aug 2, 2019, 1:07 PM IST
ತುಮಕೂರು ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಸಿ.ವಿ. ಮಹಾಲಿಂಗಪ್ಪ. ಮಾತನಾಡಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.
ತುಮಕೂರು: ಜಿಲ್ಲೆಯಲ್ಲಿ ಬರಗಾಲವಿದ್ದರೂ ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. ಆದರೂ ಹಾಲು ಉತ್ಪಾದಕರು ಸಂಕಷ್ಟ ದಲ್ಲಿದ್ದಾರೆ. ತುಮುಲ್ ಆ.1ರಿಂದ ಪ್ರತಿ ಲೀಟರ್ ಹಾಲಿಗೆ 1.50 ರೂ. ಹೆಚ್ಚಿಸಲಾಗಿದೆ ಎಂದು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಜು.31ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ 1.50 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಖರೀದಿ ದರ ಹೆಚ್ಚಿಸಿಲ್ಲ ಎಂದು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ನುಡಿದರು.
3.5 ಜಿಡ್ಡಿನಾಂಶವಿರುವ ಹಾಲಿಗೆ 25 ರೂ., ಸಂಘಗಳಿಗೆ 25.73ರೂ ಹಾಗೂ 4.1 ಜಿಡ್ಡಿನಾಂಶವಿರುವ ಹಾಲಿಗೆ 26.28 ರೂ., ಸಂಘಗಳಿಗೆ 27.01 ರೂ.ನಂತೆ ನೀಡಲಾಗು ತ್ತದೆ. ಒಕ್ಕೂಟದಲ್ಲಿ ಶೇ.95ಕ್ಕಿಂತಲೂ ಅಧಿಕ ಹಾಲು 4.1 ಜಿಡ್ಡಿನಾಂಶವಿದ್ದು, ಸಂಘಗಳಿಗೆ 27.01 ರೂ.ನಂತೆ ಪಾವತಿಸಬೇಕು. ಇದರಿಂದ ದಿನಕ್ಕೆ 11 ಲಕ್ಷ ರೂ.ಗಿಂತ ಹೆಚ್ಚುವರಿ ಖರ್ಚು ಭರಿಸಬೇಕು ಎಂದರು.
ಹಾಲು ಶೇಖರಣೆ ಸಾರ್ವಕಾಲಿಕ ದಾಖಲೆ:
ಕೋಲಾರ, ಮಡ್ಯ, ಮೈಸೂರು, ಹಾಸನ ಮುಂತಾದ ಹಾಲು ಒಕ್ಕೂಟಗಳು ನೀಡು ತ್ತಿರುವ ದರಗಳಿಗಿಂತ ಹೆಚ್ಚಿನದ್ದಾಗಿದೆ. ಬೆಂಗಳೂರು ಹಾಲು ಒಕ್ಕೂಟದ ದರಕ್ಕೆ ಸಮಾನಾಂತರವಾಗಿದೆ. ಒಕ್ಕೂಟವು ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿದಿನ 2 ಕೋಟಿ. ರೂ.ನಷ್ಟು ಬಟವಾಡೆ ಮಾಡುತ್ತಿದೆ ಎಂದು ನುಡಿದರು.
2018-19ನೇ ಸಾಲಿನಲ್ಲಿ ಸಿನಕ್ಕೆ 6,71,712 ಲೀಟರ್ ಹಾಲು ಶೇಖರಣೆಯಾಗಿತ್ತು. ಜೂ.18 ರಂದು 8,01,313 ಲೀಟರ್ ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿ ಸಲಾಗಿದೆ. ರಾಜ್ಯದ ಇತರ ಹಾಲು ಒಕ್ಕೂಟ ಗಳು ನೀಡುತ್ತಿರುವ ದರಗಳಿಗಿಂತ ಇದು ಹೆಚ್ಚಿನದಾಗಿದೆ. ಹಾಗೂ ಬೆಂಗಳೂರು ಹಾಲು ಒಕ್ಕೂಟದ ದರಕ್ಕೆ ಸಮಾನಾಂತರವಾಗಿದೆ ಎಂದರು. ಒಕ್ಕೂಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಿಸಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿ ರುವುದಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ದೊರೆಯಬಹುದಾದ ಎಲ್ಲಾ ಸೌಲಭ್ಯ ಒದಗಿ ಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯ ಸಮರ್ಪಕವಾಗಿ ಬಳಸಿ ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.
70 ಸಾವಿರ ರಾಸುಗಳಿಗೆ ವಿಮೆ: ಹಾಲು ಉತ್ಪಾದಕ ಸದಸ್ಯರ 70 ಸಾವಿರ ರಾಸುಗಳಿಗೆ 5ಕೋಟಿ ರೂ. ವೆಚ್ಚದಲ್ಲಿ ವಿಮಾ ಸೌಲಭ್ಯ ಮತ್ತು ಒಟ್ಟು 70 ಸಾವಿರ ಸದಸ್ಯರಿಗೆ ಗುಂಪು ವಿಮಾ ಯೋಜನೆಯಡಿ 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಸದಸ್ಯರು ಮತ್ತು ಸಿಬ್ಬಂದಿಗೆ 1ಲಕ್ಷ ರೂ. ವಿಮಾ ಸೌಲಭ್ಯ ಮತ್ತು ರೈತರು ಮರಣ ಹೊಂದಿದಲ್ಲಿ ಕಲ್ಯಾಣ ಟ್ರಸ್ಟ್ನಿಂದ 25 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು. ಒಕ್ಕೂಟದ ಮಾಜಿ ಅಧ್ಯಕ್ಷ ಚಂದ್ರಶೇಖರ್, ನಿರ್ದೇಶಕ ಈಶ್ವರಯ್ಯ, ರೇಣುಕಾ ಪ್ರಸಾದ್, ಶ್ರೀನಿವಾಸ್, ವಿಶ್ವನಾಥ್, ಡಾ. ಸುಬ್ಬರಾಯ್ಭಟ್, ರಾಜೇಂದ್ರ, ಸತ್ಯಮೂರ್ತಿ ಮತ್ತಿತರರಿದ್ದರು.