ಸುಗಮ ಸಂಚಾರಕ್ಕೆ ಸಂಚಕಾರ
ಹದಗೆಟ್ಟ ರಸ್ತೆಗಳ ಸುಧಾರಣೆಗೆ ಆಗ್ರಹ •ಪುರಸಭೆ ನಿರ್ಲಕ್ಷ್ಯಕ್ಕೆ ಆಕ್ರೋಶ
Team Udayavani, Aug 5, 2019, 1:00 PM IST
ಆಲಮೇಲ: ಜಿಟಿ ಜಿಟಿ ಮಳೆಯಿಂದ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿವೆ
ಅವಧೂತ ಬಂಡಗಾರ
ಆಲಮೇಲ: ಪಟ್ಟಣದಲ್ಲಿ ಜಿಟಿ ಜಿಟಿ ಮಳೆಯಿಂದ ರಸ್ತಗಳೆಲ್ಲ ಕೆಸರುಮಯವಾಗಿ ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸಣ್ಣ ಪ್ರಮಾಣದ ಜಿಟಿ ಜಿಟಿ ಮಳೆಯಾಗುತ್ತಿದ್ದು ಇದರಿಂದ ರಸ್ತೆಗೆಲ್ಲ ಕೆಸರುಮಯವಾಗಿದೆ.
ರಸ್ತೆಗಳು ಹಾಳಾಗಿದ್ದು ರಸ್ತೆ ಮಧ್ಯ ತಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡು ಅದನ್ನು ಗಮನಿಸದೆ ತೆರಳುವಾಗ ಶಾಲಾ ಮಕ್ಕಳು ಸೇರಿದಂತೆ ವೃದ್ದರು ಮಹಿಳೆಯರು ಜಾರಿ ಬೀಳುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳೆಲ್ಲ ಕೆಸರುಮಯವಾಗಿ ಸಾರ್ವಜನಿಕರ ಸಂಚಾರವನ್ನು ಸರ್ಕಸ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಹಲವಾರು ವಾರ್ಡ್ಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಗಳಲ್ಲಿ ಹಗಲಿನಲ್ಲೆ ಸಂಚರಿಸಲು ಭಯ ಪಡುವಂತಾಗಿದೆ.
ಇನ್ನು ರಾತ್ರಿ ವೇಳೆ ಸಂಚರಿಸುವುದು ತುಂಬಾ ಕಷ್ಟಕರವಾಗಿದ್ದು ಇದರಿಂದ ಹೆದರಿ ಸಂಚರುವುದೆ ಬೇಡ ಎನ್ನುವ ಮನಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳ, ಮಹಿಳೆಯರ ಪರಿಸ್ಥಿತಿ ಅಂತು ಕೇಳಲೆಬಾರದು. ಶಾಲೆಗೆ ಹೋಗಬೇಕಾದರೆ ಈ ಕೆಸರು ರಸ್ತೆಯಲ್ಲೆ ಹಾದು ಹೋಗಬೇಕು. ಅದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ.
ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ಗೆ ಹೇಳಿದರು ಪ್ರಯೋಜನವಾಗಿಲ್ಲ. ಪಟ್ಟಣದ ರಸ್ತೆಗಳ ಸ್ಥಿತಿ ನೋಡಿ ಶಾಲಾ ಮಕ್ಕಳು, ಮಹಿಳೆಯರು ಪಪಂ ಮತ್ತು ಜನಪ್ರತಿನಿಧಿಗಳಿಗೆ ಹಿಡಶಾಪ ಹಾಕುತ್ತಿದ್ದಾರೆ.
ಪಟ್ಟಣದ ಆರಾಧ್ಯ ದೇವರಾದ ಫೀರ್ ಗಾಲೀಬಸಾಬ ದರ್ಗಾಕ್ಕೆ ಹೋಗುವ ರಸ್ತೆ ಮತ್ತು ಬಸವರ ನಗರ, ನಗೇಶ ನಗರದಿಂದ ಬರುವ ರಸ್ತೆ, ದೇವರ ಅಗಸಿ ರಸ್ತೆ, ಹಳೆ ಕರ್ನಾಟಕ ಬ್ಯಾಂಕ್ ರಸ್ತೆ, ಕಡಣಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವು ರಸ್ತೆ ಮಧ್ಯೆ ನೀರು ನಿಂತು ಕೆಸರು ನಿರ್ಮಾಣವಾಗಿ ಸಂಚಾರಕ್ಕೆ ಬಾರದಂತಾಗಿದೆ.
ಸರಿಯಾದ ರಸ್ತೆ ಮಾಡಿದ್ದರು ಪರವಾಗಿಲ್ಲ. ಮಳೆಗಾಲದಲ್ಲಿ ರಸ್ತೆಯ ಮಧ್ಯೆ ನೀರು ನಿಲ್ಲದ ಹಾಗೆ ತಾತ್ಕಾಲಿಕವಾಗಿ ರಿಪೇರಿ ಮಾಡಿ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು.
•ಶೈಲಶ್ರೀ,
ಅಮರಗೊಂಡ ಸರಕಾರಿ ಶಾಲಾ ಶಿಕ್ಷಕಿ
ರಸ್ತೆಗಳ ಸ್ಥಿತಿ ನೋಡಿದರೆ ಶಾಲೆಗೆ ಹೋಗಬಾರದು ಎನಿಸುತ್ತಿದೆ. ಅಷ್ಟರಮಟ್ಟಿಗೆ ರಸ್ತೆಗಳು ಸಂಚಾರಕ್ಕೆ ಬಾರದಂತಾಗಿವೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನ ಹರಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು.
•ರುಕ್ಸಾನ್ ಮಂಗಳವೇಡೆ,
5ನೇ ತರಗತಿ ವಿದ್ಯಾರ್ಥಿನಿ