ಪಶ್ಚಿಮ ವಾಹಿನಿ, ಕಾವೇರಿ ಸ್ನಾನಘಟ್ಟ ಜಲಾವೃತ
Team Udayavani, Aug 12, 2019, 3:00 AM IST
ಶ್ರೀರಂಗಪಟ್ಟಣ: ಕೆಆರ್ಎಸ್ನಿಂದ 1.5 ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜರ ಸಂಸ್ಥಾನಕ್ಕೆ ಸೇರಿದ ಜೋಡಿಕುದುರೆ ಮಂಟಪ, ಪಶ್ಚಿಮವಾಹಿನಿಯ ಶ್ರಾದ್ಧ ಪೂಜಾ ಕಾರ್ಯ ನಡೆಸುವ ಸ್ಥಳ, ದೊಡ್ಡ ಗೋಸಾಯಿಘಟ್ಟದ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಹಾಗೂ ಈಶ್ವರ ದೇವಾಲಯಗಳು ಸಂಪೂರ್ಣ ಜಲಾವೃತವಾಗಿವೆ.
ಹೀಗಾಗಿ, ಪೂಜಾ ಕಾರ್ಯಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮೈಸೂರು -ಬೆಂಗಳೂರು ಹೆದ್ದಾರಿ ಬಳಿ ಇರುವ ಸಾಯಿ ಮಂದಿರ, ಗಂಜಾಂನ ಪ್ರಸಿದ್ದ ಅಧಿದೇವತೆ ನಿಮಿಷಾಂಬ ದೇವಾಲಯ, ವೆಲ್ಲೆಸ್ಲಿ ಸೇತುವೆ ರಸ್ತೆಯ ಬಳಿಯಲ್ಲಿರುವ ರಾಮಕೃಷ್ಣಾಶ್ರಮ ಹಾಗೂ ಆಂಜನೇಯ ದೇವಾಲಯಗಳಿಗೆ ಕಾವೇರಿಯ ನೀರು ನುಗ್ಗಿದೆ.
ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಆದರೆ, ಪಕ್ಷಿಗಳಿಗೆ ಯಾವುದೇ ಹಾನಿಯಾಗಿಲ್ಲ. ದೊಡ್ಡೇಗೌಡನ ಕೊಪ್ಪಲು ಗ್ರಾಮದ ಬಳಿಯ ಕಾವೇರಿ ನಡುಗಡ್ಡೆಯಲ್ಲಿರುವ ಗೌತಮಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ ಹಾಗೂ 7 ಮಂದಿ ಸಹಚರರನ್ನು ಮನವೊಲಿಸಿ ಆಶ್ರಮದಿಂದ ಹೊರಕ್ಕೆ ಕರೆತರಲಾಗಿದೆ.