ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ನಿಖೀಲ್
•ಜೆಡಿಎಸ್ ಯುವ ಘಟಕದಿಂದ ಸಂತ್ರಸ್ತರಿಗೆ ನೆರವು•ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಲಿ
Team Udayavani, Aug 14, 2019, 9:53 AM IST
ಗುಳೇದಗುಡ್ಡ: ಪ್ರವಾಹ ಪೀಡಿತ ಸ್ಥಳಗಳಿಗೆ ನಿಖೀಲ ಕುಮಾರಸ್ವಾಮಿ ಭೇಟಿ ನೀಡಿ ಮಾತನಾಡಿದರು.
ಗುಳೇದಗುಡ್ಡ: ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಊಹಿಸಲು ಸಾಧ್ಯವಾಗಷ್ಟು ನಷ್ಟ ಸಂಭವಿಸಿದೆ. ರೈತರು ಪ್ರವಾಹದಿಂದ ಕಂಗಾಲಾಗಿದ್ದಾರೆ. ಸಾಕಷ್ಟು ಸಾವು ನೋವು ಸಂಭವಿಸಿದೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಒತ್ತಾಯಿಸಿದರು.
ತಾಲೂಕಿನ ಬಿ.ಎನ್.ಜಾಲಿಹಾಳ, ಬಾಚನಗುಡ್ಡ, ಪಟ್ಟದಕಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಮನೆ, ಹೊಲಗಳಲ್ಲಿ ನೀರು ನುಗ್ಗಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದರು.
ಜೆಡಿಎಸ್ ಯುವ ಘಟಕದಿಂದ ಸುಮಾರು 5 ಟ್ರಕ್ಗಳಲ್ಲಿ ವಿವಿಧ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಬೇಕು. ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉತ್ತರ ಕನಾಟಕದ ಜತೆಗಿದ್ದೇವೆ. ಸಂತ್ರಸ್ತರ ನೋವಿಗೆ ಸದಾ ಸ್ಪಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಶರಣಗೌಡ ಕಂದಕೂರ, ಚಂದ್ರಕಾಂತ ಶೇಖಾ, ಮಹೇಶ ಬಿಜಾಪುರ, ಅನ್ವರಖಾನ ಪಠಾಣ, ಟಿ.ಎಸ್. ಬೆನಕಟ್ಟಿ, ಉಮೇಶ ಹುನಗುಂದ, ಸಂತೋಷ ನಾಯನೇಗಲಿ, ರಾಘು ಬಳಿಗೇರ, ಸಚಿನ ರಾಂಪುರ ಇದ್ದರು.
ಕಣ್ಣಿರು ಒರೆಸಿದ ನಿಖೀಲ್: ನಿಖೀಲ್ ಕುಮಾರಸ್ವಾಮಿ 1 ಗಂಟೆಗೂ ಹೆಚ್ಚು ಕಾಲ ಗ್ರಾಮದಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ನನ್ನ ತಂದೆಯ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದರು. ನಾನು ಯಾರನ್ನು ಟೀಕಿಸುವುದಿಲ್ಲ. ಇಂತ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೇಂದ್ರ-ರಾಜ್ಯ ಸರ್ಕಾರ ಪಕ್ಷಭೇದ ಮರೆತು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡ ಹನಮಂತ ಮಾವಿನಮರದ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಶರಣಗೌಡ ಕಂದಕೂರ, ಮಹೇಶ ಬಿಜಾಪುರ, ಟಿ.ಎಸ್. ಬೆನಕಟ್ಟಿ, ರಾಘು ಬಳಿಗೇರ, ನಾಗರಾಜ ಮುದಿಯಪ್ಪನವರ, ಅನ್ವರಖಾನ್ ಪಠಾಣ, ಸಂತೋಷ ನಾಯನೇಗಲಿ ಇದ್ದರು.