ಸಾಗರ ದಾಳಿ ಹತ್ತಿಕ್ಕಲು ಸಜ್ಜು
Team Udayavani, Aug 27, 2019, 5:05 AM IST
ಪುಣೆ: ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ಜಲಾಂತರ್ಗಾಮಿ ಪಡೆಯೊಂದಿದ್ದು, ಆ ತಂಡವು ಸಾಗರದೊಳಗೆ ಪ್ರಯಾಣಿಸಿ ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದೆ. ಗುಪ್ತಚರ ಇಲಾಖೆಯು ಈ ನಿಟ್ಟಿನಲ್ಲಿ ಎಚ್ಚರಿಸಿದ್ದು, ಅಂಥ ದಾಳಿಗಳನ್ನು ಹತ್ತಿಕ್ಕಲು ನಾವು ಸನ್ನದ್ಧವಾಗಿದ್ದೇವೆ ಎಂದು ನೌಕಾಪಡೆಯ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.’ಭಾರತೀಯ ಸಾಗರ ತೀರಗಳಲ್ಲಿ ಬದಲಾಗುತ್ತಿರುವ ಭದ್ರತಾ ಸ್ವರೂಪ’ ಎಂಬ ಕುರಿತಾದ ಉಪನ್ಯಾಸ ನೀಡಲು ಪುಣೆಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದ್ದಾರೆ. ಕರಾವಳಿ ಕಾವಲು ಹೊಣೆ ಹೊತ್ತಿರುವ ಎಲ್ಲಾ ಭದ್ರತಾ ಪಡೆಗಳಿಗೆ ಈ ಕುರಿತಂತೆ ಎಚ್ಚರಿಕೆ ರವಾನಿಸಲಾಗಿದೆ. ಸಾಗರದ ಮೂಲಕ ಆಗಬಹುದಾದ ದಾಳಿಗಳನ್ನು ತಡೆಯುವ ಬಗ್ಗೆ ಮಾರ್ಗಸೂಚಿಗಳನ್ನೂ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.