ಪರಿಹಾರ ಕಾರ್ಯ ವಿಳಂಬವಾಗಿಲ್ಲ: ಶೆಟ್ಟರ್
Team Udayavani, Aug 29, 2019, 3:03 AM IST
ಹುಬ್ಬಳ್ಳಿ: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಬರದಿದ್ದರೇನಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ರಾಜ್ಯಕ್ಕೂ ಭೇಟಿ ನೀಡಬೇಕು ಎಂಬ ಅಪೇಕ್ಷೆ ನಮಗೂ ಇದೆ. ಆದರೆ ಕಾರಣಾಂತರಗಳಿಂದ ಅವರು ಇಲ್ಲಿಗೆ ಭೇಟಿ ನೀಡಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ಪ್ರವಾಹ ಪೀಡಿತ ಯಾವ ರಾಜ್ಯಕ್ಕೂ ಪ್ರಧಾನಿ ಭೇಟಿ ನೀಡಿಲ್ಲ. ಅಮಿತ್ ಶಾ ಜವಾಬ್ದಾರಿ ವಹಿಸಿಕೊಂಡು ಪ್ರವಾಹ ಪೀಡಿತ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ ಎಂದರು.
ಮೋದಿಗೆ ವಿದೇಶಗಳಿಗೆ ಹೋಗಲು ಸಮಯ ವಿರುತ್ತದೆ. ಆದರೆ, ಪ್ರವಾಹ ಪೀಡಿತ ಕರ್ನಾಟಕಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಸಮರ್ಪಕವಾದುದಲ್ಲ. ವಿರೋಧ ಪಕ್ಷದವರೆಂಬ ಕಾರಣಕ್ಕೆ ಅವರು ಟೀಕಿಸುವುದು ಸರಿಯಲ್ಲ ಎಂದರು. ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ.
ಪ್ರವಾಹದಿಂದ ಮನೆ- ಸಾಮಗ್ರಿ ಕಳೆದುಕೊಂಡವರಿಗೆ 10,000 ರೂ. ಪರಿಹಾರ ನೀಡಲಾಗುತ್ತಿದೆ. ಪರಿಹಾರ ನೀಡುವಲ್ಲಿ ಯಾವುದೇ ಕೊರತೆಯಾಗಿಲ್ಲ. ಆರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಿತಿ-ಗತಿ ಪರಿಶೀಲಿಸಿದ್ದರು. ಸಂಪುಟ ವಿಸ್ತರಣೆ ಬಳಿಕ ಸಚಿವರು ತಂಡಗಳಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದರು.