ನಾನಂತೂ ಮುಸ್ಲಿಮರ ಓಟ್ ಕೇಳಿಲ್ಲ ,ಆದರೂ ಗೆದ್ದಿದ್ದೇನೆ : ಕೆ.ಎಸ್.ಈಶ್ವರಪ್ಪ
Team Udayavani, Sep 15, 2019, 3:21 PM IST
ಬೆಂಗಳೂರು: ಶೀಘ್ರದಲ್ಲಿಯೇ ಅಯೋಧ್ಯದಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಪುರಭವನದಲ್ಲಿ ಶ್ರೀರಾಮಸೇನೆ ಏರ್ಪಡಿಸಿದ್ದ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯದಲ್ಲಿ ಶ್ರೀರಾಮನ ಮಂದಿರ ದ್ವಂಸ ಗೊಳಿಸಿ ಬಾಬರಿ ಮಸೀದಿ ಕಟ್ಟಿದ್ದರು. ಈ ಸ್ಥಳದಲ್ಲಿ ರಾಮಮಂದಿರ ಕಟ್ಟಲಾಗುವುದು. ದೇಶದ ಗಡಿ ಭಾಗ ಲಾಲ್ ಚೌಕ್ ನಲ್ಲಿ ಪಾಕ್ ಧ್ವಜ ಕಿತ್ತು ಹಾಕಿ ಭಾರತ ಧ್ವಜ ಹಾರಾಟ ಮಾಡದಂತೆ, ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸಲಾಗಿತ್ತು. ಆದರೆ ಕಾಂಗ್ರೆಸ್ ನಿಷೇಧ ರದ್ದುಗೊಳಿಸಿತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಗೋ ಹತ್ಯೆ ನಿಷೇಧಿಸಲಾಗುವುದು ಎಂದರು. ನಾನು ವಿಧಾನಸಭೆಗೆ ಆಯ್ಕೆಯಾಗಿದ್ದು, ನಾನಂತೂ ಮುಸ್ಲಿಮರ ಓಟ್ ಕೇಳಿಲ್ಲ. ಆದರೆ ನಾನು 47 ಸಾವಿರ ಓಟ್ ಮೂಲಕ ಗೆದ್ದಿದ್ದೇನೆ. ಭಾರತೀಯ ಮುಸ್ಲಿಮರು ದೇಶಾಭಿಮಾನ ಇದ್ದರೆ ಬಿಜೆಪಿಗೆ ಓಟ್ ಹಾಕುತ್ತಾರೆ. ಇಲ್ಲದಿದ್ದರೆ ಇಲ್ಲ. ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಇಚ್ಛಿಸಿದ್ದಾರೆ. ಆದರೆ ಮುಸ್ಲಿಂ ಓಟ್ ಬೀಳುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಮುಸ್ಲಿಂಮರ ಓಟ್ ನಂಬಿಕೊಳ್ಳಬೇಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕ್ರಿಶ್ಚಿಯನ್ ಹಾಗೂ ಮುಸ್ಲಿಂ ರಾಷ್ಟ್ರಗಳು ಪಾಕ್ ಗೆ ಶಸ್ತ್ರಗಳನ್ನು ನೀಡಿ ಭಾರತದ ವಿರುದ್ಧ ದಾಳಿ ಮಾಡಿಸಿದವು. ಆಗ ಭಾರತ ಒಬ್ಬಂಟಿ ಯಾಗಿತ್ತು. ಪ್ರಸ್ತುತ ಪ್ರಧಾನಿ ಮೋದಿ ವಿಶ್ವದ ಹಲವು ದೇಶಗಳನ್ನು ಸುತ್ತಿ ಭಾರತವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿದ್ದು, ಪಾಕ್ ಒಬ್ಬಂಟಿಯಾಗಿದೆ ಎಂದರು.