ಕಾಶ್ಮೀರದಲ್ಲಿ ಫಿಲಂ ಸಿಟಿ ಸ್ಥಾಪಿಸಲಿದ್ದಾರೆ ಕನ್ನಡಿಗ ಉದ್ಯಮಿ ಬಿ.ಆರ್. ಶೆಟ್ಟಿ
Team Udayavani, Sep 20, 2019, 5:05 AM IST
ಹೊಸದಿಲ್ಲಿ: ಅನಿವಾಸಿ ಭಾರತೀಯ ಉದ್ಯಮಿ, ಕನ್ನಡಿಗ ಬಿ.ಆರ್. ಶೆಟ್ಟಿ ಅವರು ಜಮ್ಮು ಮತ್ತು ಕಾಶ್ಮೀರ ದಲ್ಲಿ “ಫಿಲಂ ಸಿಟಿ’ ಸ್ಥಾಪನೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಅವರು ಕಣಿವೆ ರಾಜ್ಯದಲ್ಲಿ 3 ಸಾವಿರ ಎಕರೆ ಜಮೀನಿನ ಅಗತ್ಯವಿದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ತಮ್ಮ ಸಂಸ್ಥೆ ಬಿಆರ್ಎಸ್ಗೆ ಗ್ರೂಪ್ಗೆ ಜಮೀನು ಕೊಡುವ ಅವಕಾಶಗಳು ಇವೆ ಎಂದು ಹೇಳಿದ್ದಾರೆ.
ಅರೇಬಿಯನ್ ಬ್ಯುಸಿನೆಸ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರದಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಫಿಲಂ ಸಿಟಿ ನಿರ್ಮಿಸುವ ಬಯಕೆಯಿದೆ. ಅದೊಂದು ಪ್ರಾಕೃತಿಕ ಸೌಂದರ್ಯ ತುಂಬಿರುವ ಪ್ರದೇಶ. ಅಲ್ಲಿ ಫಿಲಂ ಸಿಟಿ ಸ್ಥಾಪಿಸಿದರೆ, ಚಿತ್ರೋದ್ಯ ಮದವರು ಅಲ್ಲಿಗೆ ಬಂದು ಸಿನೆಮಾಗಳನ್ನು ಚಿತ್ರೀಕರಿಸ ಬಹುದು. ಜತೆಗೆ ಪ್ರವಾಸೋದ್ಯಮದ ಅಭಿವೃದ್ಧಿಯೂ ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.
ಆಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಇಎ ಪ್ರವಾಸ ಕೈಗೊಂಡಿದ್ದಾಗ ಬಿ.ಆರ್.ಶೆಟ್ಟಿ ಕಣಿವೆ ರಾಜ್ಯದಲ್ಲಿ 1 ಬಿಲಿಯನ್ ಡಾಲರ್ ಮೊತ್ತ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಇದೇ ವೇಳೆ, ಭಾರತದ ಜಿಡಿಪಿ ದರ ಕುಸಿಯುತ್ತಿರುವ ಕುರಿತು ಮಾತನಾಡಿದ ಶೆಟ್ಟಿ, ಜಿಡಿಪಿ ಕುಸಿದರೆ ಭಾರತವೂ ಕುಸಿಯುತ್ತದೆ ಎಂದು ಜನ ಹೇಳುತ್ತಾರೆ. ಆದರೆ, ನಾವು ಸಕಾರಾತ್ಮಕ ಭಾವನೆ ಹೊಂದಿರಬೇಕು ಎಂದಿದ್ದಾರೆ.