ನಮ್ಮ ಒಬ್ಬ ಯೋಧ ಹುತಾತ್ಮನಾದರೂ ನಾವು ಹತ್ತು ಶತ್ರುಗಳನ್ನು ಕೊಲ್ಲುತ್ತೇವೆ; ಶಾ ಎಚ್ಚರಿಕೆ
Team Udayavani, Oct 10, 2019, 3:12 PM IST
ಮಹಾರಾಷ್ಟ್ರ/ಸಾಂಗ್ಲಿ:ಭಾರತದ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚು ಬಲಿಷ್ಠಗೊಳಿಸಲಾಗಿದೆ. ಆ ನಿಟ್ಟಿನಲ್ಲಿ ಇದೀಗ ಇಡೀ ವಿಶ್ವಕ್ಕೇ ಗೊತ್ತಾಗಿದೆ..ಒಂದು ವೇಳೆ ನಮ್ಮ ಒಬ್ಬ ಯೋಧ ಹುತಾತ್ಮರಾದರೂ ನಾವು ಅದಕ್ಕೆ ಪ್ರತಿಯಾಗಿ ಹತ್ತು ಶತ್ರುಗಳನ್ನು ಕೊಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುಲ್ವಾಮಾ ದಾಳಿ ಬಳಿಕ ಕೈಗೊಂಡ ಬಾಲಾಕೋಟ್ ವಾಯುಸೇನೆ ದಾಳಿಯನ್ನು ಉಲ್ಲೇಖಿಸಿ ಹೇಳಿದರು.
ಅವರು ಗುರುವಾರ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜಾಟ್ ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಒಂದು ವೇಳೆ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಕ್ರಮದ ಬಗ್ಗೆ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಶಾ ಈ ಸಂದರ್ಭದಲ್ಲಿ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಶರದ್ ಪವಾರ್ (ಎನ್ ಸಿಪಿ) ವಿರೋಧ ವ್ಯಕ್ತಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 370ನೇ ವಿಧಿಯನ್ನು ರದ್ದುಗೊಳಿಸಿರುವುದು ಗ್ರೇಟ್ ಜಾಬ್ ಎಂದು ಶಾ ಶ್ಲಾಘಿಸಿದರು.