ಆಕಾಶದಲ್ಲೊಂದು ದಿನ


Team Udayavani, Oct 13, 2019, 5:32 AM IST

e6

ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ ಭಾವನೆಗಳನ್ನೆಲ್ಲ ಗರಿಗೆದರಿಸಿಕೊಳ್ಳುತ್ತ, ಆಗ ತಾನೇ ರೆಕ್ಕೆ ಬಿರಿದ ಹಕ್ಕಿಯಂತೆ ಕೂತಲ್ಲಿ ಕೂರಲಾರದೆ ನಿಂತಲ್ಲಿ ನಿಲ್ಲಲಾರದೆ, ಬಿಸಿ ಬಾಣಲೆಗೆ ಹಾಕಿದ ಪಾಪ್‌ಕಾರ್ನ್ನಂತೆ ಪಟಗುಡುತ್ತ, ಪರಿಚಿತರಿಗೆ ನೆಂಟರಿಷ್ಟರಿಗೆ ಹೇಳ್ಳೋದೇನೋ ಸರಿ, ಆದರೆ ಹಾಲು ಮಾರೋನಿಗೂ ತರಕಾರಿ ಅಂಗಡಿಯವನಿಗೂ ಕಂಡ ಕಂಡವರಿಗೆಲ್ಲ ನೆಕ್ಸ್ಟ್ ವೀಕ್‌ ನಾವು ಅಬ್ರಾಡ್‌ಗೆ ಹೋಗ್ತಿದ್ದೀವಿ, ಮರಳಿ ಬರೋದು ಇನ್ನೆರಡು ವರ್ಷ ಬಿಟ್ಟು ಅಂತ ಟೀವಿಯಲ್ಲಿ ಬೀಗುತ್ತ ಹೇಳುವ ನನ್ನ ಗರ್ವದ ಪರಿ ನೆನೆದಾಗಲೆಲ್ಲ ನನಗೇ ಹುಚ್ಚಾಬಟ್ಟೆ ನಗು ತರಿಸುವುದಂತೂ ನಿಜ !

ಅಲ್ಲಿಗೆ ಹೋದ ಮೇಲೆ ತಕ್ಷಣ ತಿನ್ನೋಕೆ ಏನು ಮಾಡೋದು? ನನ್ನ ಎರಡು ವರ್ಷದ ಪುಟ್ಟ ಮಗುವಿಗೆ ಏನು ತೆಗೆದುಕೊಂಡು ಹೋಗಲಿ? ವಿಮಾನದೊಳಗೆ ಯಾವ ತಿಂಡಿ ಅಲೋ ಮಾಡ್ತಾರೆ? ಯಾವ ಸಾಮಾನುಗಳು ವಿಮಾನ ಪ್ರಯಾಣಕ್ಕೆ ಬಾಹಿರ? ಸಾವಿರಾರು ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲೇ ತಿಂಗಳು ಉರುಳಿಹೋಯ್ತು. ಹೆಂಡತಿ-ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೊರಟಿದ್ದ ನನ್ನವರಿಗೆ ಬಾಡಿಗೆಗೆ ಮನೆ ಸಿಗದೆ, ಕೈಕಾಲು ಕಟ್ಟಿ ಹಾಕಿದ ಹಾಗಾಗಿತ್ತು. ಸದ್ಯ ಹೊರಡೋ ನಾಲ್ಕು ದಿನದ ಹಿಂದೆ ಅಲ್ಲಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಇವರ ಸ್ನೇಹಿತ ಮನೆ ಬುಕ್‌ ಮಾಡಿದ್ದ.

ವಿದೇಶ ಪ್ರಯಾಣದ ಅನುಭವಿಗಳಾದ ಗೆಳತಿ ಚಂದ್ರಿಕಾ ಹಾಗೂ ಅಪರ್ಣಾರ ಸಲಹೆ-ಸೂಚನೆಗಳ ಆಧಾರದ ಮೇರೆಗೆ ಬಟ್ಟೆ , ಪಾತ್ರೆ ಪಗಡೆ, ನಾಲ್ಕು ದಿನಕ್ಕಾಗುವಷ್ಟು ದಿನಸಿ ಎಲ್ಲವೂ ಪ್ಯಾಕಾಗತೊಡಗಿದವು. ತೂಕ ಹಾಕಿದ್ದೇನು ! ಭಟ್ಟಿ ಇಳಿಸಿದ್ದೇನು, ಶಾಪಿಂಗ್‌ ಮಾಡಿದ್ದೇನು! ಎಲ್ಲವೂ ಅದ್ದೂರಿಯಾಗೇ ನಡೆದಿತ್ತು !

ವಿಮಾನ ನಿಲ್ದಾಣ ಸೇರಿ ಜೊತೆಗೆ ಬಂದಿದ್ದ ಸಂಬಂಧಿಕರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಟಾ ಟಾ ಬೈ ಹೇಳ್ಳೋವಾಗ ಹೆಮ್ಮೆಯಿಂದ ಮನಸ್ಸು ಬೀಗಿತ್ತು. ಅಲ್ಲೇ ಇದ್ದ ತೂಕದ ಯಂತ್ರಕ್ಕೆ ಭಾರವಿದ್ದ ಲಗ್ಗೇಜ್‌ಗಳನ್ನೆಲ್ಲ ತೂಕ ಹಾಕಿ ನನ್ನವರು ಪರಿಶೀಲಿಸಿಕೊಂಡರು. ಲಗ್ಗೇಜ್‌ ಮೇಲೆ ದಪ್ಪನಾಗಿ ಬರೆದಿದ್ದ ನಮ್ಮ ಅಡ್ರೆಸ್‌ ಅರ್ಧ ಮೈಲಿಗೂ ಎದ್ದು ಕಾಣುವಂತಿತ್ತು. ಲಗ್ಗೇಜ್‌ ಸ್ಕ್ಯಾನಿಂಗ್‌ಗೆ ಹೋಗೋ ಸಮಯ. ನನ್ನವರು, “ಸರಿಯಾಗಿ ಪ್ಯಾಕ್‌ ಮಾಡಿದ್ಯಾ ತಾನೆ ! ಮತ್ತೆ ಪ್ರಾಬ್ಲಿಮ್‌ ಆದ್ರೆ ನಮಗೆ ಹುಟ್ಟಿದ ದಿನ ಕಾಣುತ್ತೆ’ ಅಂದರು. ಮೊದಲೇ ಪುಕ ಪುಕ ಅನ್ನುತ್ತಿದ್ದ ನನ್ನ ಧೈರ್ಯ ಫ್ಯೂಸ್‌ ಕಿತ್ತ ಕರೆಂಟ್‌ನಂತಾಯ್ತು. ನಾವು ಹೊರಟಿದ್ದ ಏರ್‌ಲೈನ್ಸ್‌ನಲ್ಲಿ ಕೊಬ್ಬರಿ ನಿಷೇಧಿಸಲಾಗಿತ್ತು. ಕಾಯಿ ಇಲ್ಲದೆ ಅಡಿಗೆ ಮಾಡಲು ಬರದ ನಾನು ಕೊಬ್ಬರಿಯನ್ನಾದರೂ ತೆಗೆದುಕೊಂಡು ಹೋಗೋಣ ಅಂತ ಮನಸ್ಸು ಬೇಡವೆಂದರೂ ಇವರಿಗೆ ತಿಳಿಯದಂತೆ ಭಂಡ ಧೈರ್ಯ ಮಾಡಿ ಎರಡು ಕೊಬ್ಬರಿ ಹೋಳನ್ನು ಬಟ್ಟೆಯೊಳಗೆ ಸುತ್ತಿ ಹಾಕಿದ್ದೆ. ಈಗ ಪೀಕಲಾಟ ಶುರುವಾಯಿತು. ಇವರಿಗೆ ಹೇಳ್ಳೋದೋ ಬೇಡವೋ! ಅಕಸ್ಮಾತ್‌ ಕೊಬ್ಬರಿ ಸಿಕ್ಕಿಬಿದ್ದು ಲಗ್ಗೇಜ್‌ ತೆಗೆಸಿದರೆ! ಅಯ್ಯೋ ಶಿವನೇ! ಎಂದು ಇದ್ದಬದ್ದ ದೇವರಿಗೆಲ್ಲ ಹರಕೆ ಕಟ್ಟಿಕೊಂಡೆ. ದೇವರು ಯಾಕೋ ನನ್ನ ಮೇಲೆ ಕೃಪೆ ತೋರಿದಂತಿರಲಿಲ್ಲ. ಸ್ಕ್ಯಾನಿಂಗ್‌ ಮುಗಿಸಿ ಕರ್ರನೆಯ ರ್ಯಾಲಿ ಮೇಲೆ ಹೋಗುತ್ತಿದ್ದ 40 ಕೆ.ಜಿ. ಭಾರದ ಆ ಲಗ್ಗೇಜ್‌ ಬ್ಯಾಗನ್ನು ಆತ ತಡೆದು ನಿಲ್ಲಿಸಿಯೇ ಬಿಟ್ಟ.

ಇವರು ನನ್ನತ್ತ ಅನುಮಾನದಿಂದ ಕಣ್ಣು ಬಿಟ್ಟರು. ಕೈಕಾಲು ಅದುರಲು ಶುರುವಾಯ್ತು.
“ಸರ್‌, ಈ ಬ್ಯಾಗ್‌ ಓವರ್‌ ವೈಟ್‌ ಇದೆ. ಐದು ಕೆಜಿ ಕಡಿಮೆ ಮಾಡಿ’ ಅಂದ. ಅಯ್ಯೋ! ನಿಗದಿಸಲಾಗಿದ್ದ ತೂಕಕ್ಕೆ ಅನುಗುಣವಾಗಿ ಲಗ್ಗೇಜ್‌ ಪ್ಯಾಕ್‌ ಮಾಡಿಯಾಗಿತ್ತು. ಆದರೆ, ಇವನೇಕೆ ಹೀಗನ್ನುತ್ತಿದ್ದಾನೆ ಎಂದು ಗಾಬರಿಯಾಯಿತು. ಈಗ ಲಗ್ಗೇಜ್‌ ತೆರೆದರೆ ಕೊಬ್ಬರಿಯೂ ಇವರ ಕಣ್ಣಿಗೆ ಬೀಳುತ್ತೆ. ಮೊದಲೇ ಇವರಿಗೆ ಮೂಗಿನ ತುದೀಲೇ ಕೋಪ. ಕೊಬ್ಬರಿ ಜೊತೆ ನನ್ನನ್ನೂ ಕಸದ ಬುಟ್ಟಿಗೆ ಎಸೆದು ಹೋಗಿºಟ್ರೆ! ಹೇಗಾದರೂ ಮಾಡಿ ಈ ಸಂದರ್ಭದಿಂದ ಪಾರಾಗಲು ಯೋಚಿಸುತ್ತಿದ್ದೆ. ಅಷ್ಟರಲ್ಲೇ ಇವರು, “”ನೋಡಿ ಸರ್‌, ಇನ್ನೊಂದು ಕೇವಲ 20 ಕೆ. ಜಿ. ತೂಕ ಇದೆ. ಅದಕ್ಕೆ ಕಂಪನ್ಸೇಷನ್‌ ಮಾಡಿಬಿಡಿ” ಅಂತ ರಿಕ್ವೆಸ್ಟ್‌ ಮಾಡಿದರು. ಅವನು ಇವರನ್ನೊಮ್ಮೆ, ನನ್ನನ್ನೊಮ್ಮೆ ಕಂಕುಳಲ್ಲಿದ್ದ ಮಗುನ್ನೊಮ್ಮೆ ನೋಡಿ, “ಹೆವಿ ಬ್ಯಾಗ್‌ ಅಂತ ಟ್ಯಾಗ್‌ ಹಾಕಿ ದೂಕಿದ’ ನೆಮ್ಮದಿಯ ಉಸಿರುಬಿಟ್ಟೆವು.

ಮೊದಲ ಮಳೆಯ ಗುಟುಕಿಗೆ, ಘಮಲಿಗೆ ಕಾಯುವ ಚಾತಕ ಪಕ್ಷಿಯಂತೆ ಕಾದಿದ್ದ ನಾನು ವಿಮಾನ ನಿಲ್ದಾಣ ಒಳಹೊಕ್ಕ ಕ್ಷಣದಿಂದ ಪುಳಕಿತಳಾಗಿದ್ದೆ. ಸರಣಿಯಲ್ಲಿ ಕಾದದ್ದಾಯ್ತು. ಪಾಸ್‌ಪೋರ್ಟ್‌, ಬ್ಯಾಗ್‌ ಹಾಗೂ ದೇಹದ ಪರಿಶೀಲನ ಕಾರ್ಯಗಳು ಸಾಂಗವಾಗಿ ನೆರವೇರಿದವು.

ವಿಮಾನ ಪ್ರವೇಶದ ಕ್ಷಣಗಣನೆ ಶುರುವಾಯಿತು. ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಮೂರು ವರ್ಷ ಒಳಗಿನ ಮಗು ಹೊಂದಿರುವ ಪೋಷಕರಿಗೆ ಮೊದಲ ಆದ್ಯತೆ. ಉದ್ದನೆಯ ದೊಡ್ಡ ಕೊಳವೆಯ ಮೂಲಕ ನಾವು ವಿಮಾನದ ಬಾಗಿಲಿಗೆ ಪಾದಾರ್ಪಣೆ ಮಾಡಿದೆವು. ಅಲ್ಲಿ ನಿಂತಿದ್ದ ಸಿಬ್ಬಂದಿ ವರ್ಗ ಹಾಗೂ ಗಗನಸಖೀಯರು ಶುಭಕಾಮನೆ ಕೋರಿ ನಗುಮೊಗದಿಂದ ಆಹ್ವಾನಿಸಿದರು.

ವಿಮಾನ ಟೇಕ್‌ ಆಫ್ ಆಗುವಾಗ ಕ್ಯಾಬಿನ್‌ ಹಾಗೂ ಹೊರಗಿನ ಗಾಳಿಯ ಒತ್ತಡದ ವ್ಯತ್ಯಾಸದಿಂದ ಕಿವಿ ಗುಂಯ್‌ಗಾಡುತ್ತದೆ. ಆಗ ಬಾಯಲ್ಲಿ ಏನಾದರೂ ಹಾಕಿಕೊಂಡು ಜಗಿಯಲು ಶುರು ಮಾಡ್ಬೇಕು ಅನ್ನೋ ಅನುಭವಿ ಗೆಳತಿಯರ ಸಲಹೆಯ ಮೇರೆಗೆ ಜೇಬಿನಲ್ಲಿದ್ದ ಚಾಕಲೇಟ್‌ ಬಾಯಿಗೆ ಹೋಯಿತು. ಮೂವರೂ ಬೆಲ್ಟ… ಸರಿಯಾಗಿ ಹಾಕಿಕೊಂಡೆವೋ ಇಲ್ಲವೋ ಅಂತ ಪುನಃ ಪುನಃ ಪರಿಶೀಲಿಸಿಕೊಂಡದ್ದಾಯಿತು. ಇನ್ನು ಆಕಾಶಕ್ಕೆ ಜಿಗಿಯಲು ಕೆಲವೇ ನಿಮಿಷಗಳು. ದೇವರು ಮತ್ತೆ ನೆನಪಾದ ! ಸಂಸಾರ ಈಗ ಶುರುವಾಗ್ತಿದೆ, ಹಳೆಯ ಕಹಿಘಟನೆಗಳು, ವೈಮನಸ್ಯ ಮರೆತು ಹೊಸ ಜೀವನಕ್ಕೆ ಕಾಲಿಟಿ¤ದ್ದೀವಿ. ಯಾವುದೇ ಅಡೆತಡೆ, ಅಹಿತಕರ ಘಟನೆಗಳು ನಡೆಯದಂತೆ ಪ್ರಯಾಣ ಸುಖಕರವಾಗಿ ರಲೆಂದು ಬೇಡಿಯಾಯ್ತು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ವಿಮಾನ ಟೇಕ್‌ ಆಫ್ ಆಗೇ ಬಿಟ್ಟು. ವಾವ್‌! ಅದ್ಭುತ ! ಕಿಟಕಿಯ ಪಕ್ಕ ಕೂತಿದ್ದ ನನಗೆ ವಿಮಾನದ ರೆಕ್ಕೆಗಳು ಮೇಲೊಮ್ಮೆ ಕೆಳಗೊಮ್ಮೆ ಆಗುತ್ತ ಮೋಡಗಳನ್ನು ಸೀಳಿಕೊಂಡು ಹೋಗುತ್ತಿದ್ದುದನ್ನು ನೋಡಿ ಮೈನವಿರೇಳುತ್ತಿತ್ತು. ಭೂಮಿಯಿಂದ 10 ರಿಂದ 12 ಕಿ. ಮೀ. ಎತ್ತರದಲ್ಲಿ ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಹೊಯ್ದಾಟವಾಡುವಾಗ ಜೀವ ಬಾಯಿಗೆ ಬಂದಂತಾಗುತ್ತಿತ್ತು. ಆದರೆ, ಅದು ಸಹಜವೆಂದು ಓದಿ ತಿಳಿದಿದ್ದರ ಪರಿಣಾಮವಾಗಿ ಸಾವರಿಸಿಕೊಂಡು ಮಗುವಿನ ಮುಖ ನೋಡುತ್ತ ಪ್ರತಿ ಹೊಯ್ದಾಟವನ್ನೂ ಆನಂದಿಸಲು ಶುರು ಮಾಡಿದೆ. ಭೂಮಿ ಸ್ವಲ್ಪವೂ ಕಾಣದಾಗಿ ಮೋಡಗಳ ಮೇಲೆ ಬರೇ ಬಿಳಿಯ ಬಿತ್ತರದ ಆಗಸದಲ್ಲಿ ತೇಲುವಾಗ ಜೀವನ ಸಾರ್ಥಕವೆನಿಸಿದ್ದಂತೂ ದಿಟ !

ವಿಮಾನದಲ್ಲಿ ಕುಳಿತು ಇನ್ನೂ 20 ನಿಮಿಷಗಳೂ ಉರುಳಿರಲಿಲ್ಲ. ನನ್ನ ಎರ ಡು ವರ್ಷದ ಮಗುವಿಗೆ ಮೂಗಿನಲ್ಲಿ ರಕ್ತ ಬರಲು ಶುರುವಾಯಿತು. ಎಲ್ಲೋ ಹೀಗೆ ಗೂಗಲ್‌ನಲ್ಲಿ ಓದಿದ್ದು ನೆನಪಿಗೆ ಬಂದದ್ದರ ಜೊತೆಗೆ ಗಾಬರಿಯೂ ಶುರುವಾಯಿತು. ನನ್ನವರನ್ನೂ ಹೆದರಿಸಿದೆ. “ರೀ ಗೂಗಲ್‌ನಲ್ಲಿ ಓದಿದ್ದೆ, ಪ್ರಸರ್‌ ಡಿಪರೆನ್ಸ್‌ನಿಂದ ಉಸಿರು ಕಟ್ಟೋದು, ಮೂಗಲ್ಲಿ ರಕ್ತ ಬರೋದು ಎಲ್ಲಾ ಆಗುತ್ತೆ’ ಎಂದೆ. ಎದುರಲ್ಲೇ ಇದ್ದ ಗಗನಸಖೀಯನ್ನು ಆಹ್ವಾನಿಸುವ ದುಂಡನೆಯ ಕೆಂಪು ಬಟನ್‌ ಒತ್ತಿದ್ದೂ ಆಯ್ತು.

ಮೂರ್ನಾಲ್ಕು ನಿಮಿಷಗಳಲ್ಲಿ ರಕ್ತವೇನೋ ನಿಂತಿತು. ಗಗನಸಖೀ ವಿಚಾರಣೆಗೆ ಬಂದಳು. ಸದ್ಯಕ್ಕೆ ನಿಂತಿದೆ ಅಂತ ಅವಳನ್ನು ಅಲ್ಲಿಂದ ಸಾಗು ಹಾಕಿದೆವು. ಅಸಲಿಗೆ ಮೂಗಿನ ಎರಡೂ ಹೊಳ್ಳೆಗಳಿಗೆ ಪುಟ್ಟ ಬೆರಳುಗಳನ್ನು ತೂರಿಸಿ ಉಗುರಿನಿಂದ ಗಾಯವಾಗಿ ಬಂದ ರಕ್ತವಾಗಿತ್ತು. ಇದು ಹೊಸತೇನಲ್ಲ ಸಾಕಷ್ಟು ಬಾರಿ ರೀತಿ ಮಗು ಮಾಡಿಕೊಂಡದ್ದು ನೋಡಿಯಾಗಿತ್ತು. ಆದರೆ ಈ ಬಾರಿ ಅತಿ ಬುದ್ಧಿವಂತಿಕೆಯಿಂದಾಗಿ ವಿಮಾನ ಪ್ರಯಾಣದ ಬಗ್ಗೆ ಓದಿದ್ದರ, ಅವರಿವರ ಸಲಹೆ-ಸೂಚನೆಗಳನ್ನು ಕೇಳಿದ್ದರ ಫ‌ಲವಾಗಿ ಮಂಕು ಕವಿದಿತ್ತು.

ಅರ್ಚನಾ ಎಚ್‌.

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.