ಸಿಎಂ ಯಾವ ದೊಡ್ಡ ಹುದ್ದೆ ಕೊಡುತ್ತಾರೋ ಗೊತ್ತಿಲ್ಲ
Team Udayavani, Oct 17, 2019, 3:00 AM IST
ಬೆಳಗಾವಿ: “ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಮೊದಲಿಂದಲೂ ವಿಶೇಷ ಪ್ರೀತಿ. ನನಗೆ ಅವರು ಯಾವ ದೊಡ್ಡ ಹುದ್ದೆ ಕೊಡುತ್ತಾರೊ ಗೊತ್ತಿಲ್ಲ’ ಎಂದು ಶಾಸಕ ಉಮೇಶ ಕತ್ತಿ ಹೇಳಿದರು. ಬುಧವಾರ ಸುದ್ದಿಗಾರರ ಜತೆ ಮಾತನಾಡಿ, “ರಾಜ್ಯಕ್ಕೆ ಈಗ ಒಬ್ಬರು ಸಿಎಂ, ಮೂವರು ಉಪಮುಖ್ಯಮಂತ್ರಿಗಳು ಹಾಗೂ ಒಬ್ಬರು ರಾಜ್ಯಪಾಲರಿದ್ದಾರೆ. ಹೀಗಿರುವಾಗ ಇನ್ನೆಂತಹ ದೊಡ್ಡ ಹುದ್ದೆ ಕೊಡುತ್ತಾರೋ ಗೊತ್ತಾಗಿಲ್ಲ.
ಬಹುಶಃ ನನ್ನನ್ನು ಸಮಾಧಾನ ಪಡಿಸಲು ಈ ರೀತಿ ಹೇಳಿರಬಹುದು. ಕರ್ನಾಟಕದಲ್ಲಿ ಈಗ ಯಾವ ದೊಡ್ಡ ಹುದ್ದೆ ಇದೆಯೋ ಗೊತ್ತಿಲ್ಲ. ಆದರೆ, ಈ ದೊಡ್ಡ ಹುದ್ದೆ ದೇಶದ ಒಳಗೆ ಇದ್ದರೆ ಒಳ್ಳೆಯದು. ಅಮೆರಿಕ ಸೇರಿ ಹೊರದೇಶದಲ್ಲಿ ಇರಬಾರದು. ನನಗೆ ಸಚಿವನಾಗುವ ಎಲ್ಲ ಅರ್ಹತೆಯಿದೆ. ಆದರೆ, ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಮುಂದೆ ಉಮೇಶ ಕತ್ತಿ ಸಿಎಂ ಆಗಲಿದ್ದಾರೆ ಎಂದು ಪ್ರಭಾಕರ ಕೋರೆ ಹೇಳಿದ್ದಾರೆ. ಅವಕಾಶ ಕೊಟ್ಟರೆ ನಾನು ಮುಖ್ಯಮಂತ್ರಿ ಆಗಲು ಸಿದ್ಧ. ಆದರೆ, ಸಿಎಂ ಆಗೋಕೆ ಹಣೆಯಲ್ಲಿ ಬರೆದಿರಬೇಕು’ ಎಂದರು.