ದೀಪಾವಳಿಗೆ ತಾಂಡಾ ಮಕ್ಕಳಿಂದ ಹೂವು ಸಂಗ್ರಹ
Team Udayavani, Oct 30, 2019, 4:21 PM IST
ಚಿಕ್ಕನಾಯಕನಹಳ್ಳಿ: ತಾಲೂಕಿನ ಆಲದಕಟ್ಟೆ ಲಂಬಾಣಿ ತಾಂಡಾ ಸೇರಿದಂತೆ ಹಲವಾರು ಲಂಬಾಣಿ ತಾಂಡಾ ಗಳಲ್ಲಿ ದೀಪಾವಳಿ ಬೆಳಕಿನ ಹಬ್ಬವನ್ನು ಸಾಂಪ್ರದಾಯಿಕ ವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಲಂಬಾಣಿ ತಾಂಡಾಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಅಮಾವಾಸ್ಯೆಯಂದು ಹಿರಿಯರಿಗೆ ಪೂಜೆ ಸಲ್ಲಿಸು ವುದು ವಾಡಿಕೆ. ಅದರಂತೆ, ಹಿರಿಯರಿಗೆ ಇಷ್ಟವಾದ ಕುರಿ, ಕೋಳಿ ಮೇಕೆ ಮಾಂಸದ ಅಡುಗೆ ತಯಾರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜಯರಾಜ್ ಆಲದಕಟ್ಟೆ ಮಾತನಾಡಿ, ಪೂಜೆ ಸಲ್ಲಿಸಿದ ರಾತ್ರಿ ಮಹಿಳೆಯರು ಲಂಬಾಣಿ ಉಡುಗೆ ತೊಟ್ಟು ದೀಪ ಹಿಡಿದು ಮನೆ ಮನೆಗಳಿಗೆ ಹೋಗಿ ಹಾಡುಗಳನ್ನು ಹಾಡಿ, ಮನೆಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಮನೆಯಲ್ಲಿನ ಹಿರಿಯರು ದೀಪ ಹಿಡಿದು ಬಂದಿರುವ ಮಹಿಳೆಯರಿಗೆ, ಯುವತಿಯರಿಗೆ ಹಣ ನೀಡಿ ಕಳುಹಿಸುತ್ತಾರೆ. ಮರುದಿನ ಊರಿನ ಯುವತಿಯರು ತಮ್ಮ ಹೊಲ ಅಥವಾ ಹತ್ತಿರದ ತೋಟ, ಕಾಡುಗಳಿಗೆ ತೆರಳಿ, ರಾಗಿ, ನವಣೆ ಜೋಳ, ಹೂ ಸಂಗ್ರಹಿಸಿ ಪ್ರತಿ ಮನೆ ಮುಂದೆ ಹಾಡುಗಳನ್ನು ಹೇಳುತ್ತಾ ರಂಗೋಲಿ, ಹಾಕಿ ಸಗಣಿ ಯಲ್ಲಿ ಬೆನಕನನ್ನು ಮನೆ ಬಾಗಿಲಿನಲ್ಲಿ ಪ್ರತಿಷ್ಠಾಪಿಸುತ್ತಾರೆ. ಮನೆ ಬಾಗಿಲನ್ನು ತಂಗಟಿ ಹೂವಿನಿಂದ ಸಿಂಗರಿಸುತ್ತಾರೆ.
ನಂತರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಅಡುಗೆ ತಯಾರಿಸುತ್ತಾರೆ. ಸಂಜೆ ಊರಿನ ಗ್ರಾಮಸ್ಥರೆಲ್ಲ ದೇವಾಲಯದ ಬಳಿ ಸೇರಿ ಸಿಹಿ ಅಡುಗೆ ಸವಿದು ಹಬ್ಬ ಆಚರಿಸುತ್ತಾರೆ. ಲಂಬಾಣಿ ಸಂಪ್ರದಾಯದಲ್ಲಿ ದೀಪಾವಳಿ ವಿಜೃಂಭಣೆಯ ಹಬ್ಬವಾಗಿದೆ. ಹಿರಿಯರ ಪೂಜೆ ಈ ಹಬ್ಬದ ವಿಶೇಷವಾಗಿದೆ.