ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
Team Udayavani, Nov 6, 2019, 3:09 AM IST
ಬೆಂಗಳೂರು: ಡ್ರಗ್ಸ್ ಮಾಫಿಯಾದ ಪರವಾಗಿ ಕೈಜೋಡಿಸಿ, ಮುಂದಿನ ಪೀಳಿಗೆಯನ್ನು ತಪ್ಪು ದಾರಿಗೆ ಎಳೆಯುತ್ತಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳು ತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು. ಬೆಂಗಳೂರಿನ “ಉದಯವಾಣಿ’ ಕಚೇರಿ ಯಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ಇಲಾಖೆಯ ಅಧಿಕಾರಿ ಡ್ರಗ್ಸ್ ಮಾಫಿಯಾದ ಜತೆ ಕೈಜೋಡಿಸಿರುವುದು ಕಂಡು ಬಂದರೆ, 24 ಗಂಟೆಯೊಳಗಾಗಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮ ರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದೇವೆ. ಹಾಗೆಯೇ, ಈ ಮಾಫಿ ಯಾದ ಜತೆ ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿರುವು ಕಂಡು ಬಂದರೆ, ಅಂತವರ ವಿರುದ್ಧ 24 ಗಂಟೆಯೊಳಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
“ವಾರ್ ಅಗೆನೆಸ್ಟ್ ಡ್ರಗ್ಸ್’: ಉತ್ತರ ಭಾರತದ ಕೆಲವು ರಾಜ್ಯ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಕೇರಳ ಮತ್ತು ಗೋವಾದಿಂದ ಮಾದಕ ವಸ್ತುಗಳು ಹೆಚ್ಚಾಗಿ ಪೂರೈಕೆ ಆಗುತ್ತಿವೆ. ಡ್ರಗ್ಸ್ ಬಳಕೆಯಲ್ಲಿ ಯುವ ಜನತೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಮಾದಕ ವಸ್ತುಗಳ ವಿರುದ್ಧ ನಿರಂತರ ದಾಳಿ ನಡೆಯುತ್ತಲೇ ಇದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ಹುಬ್ಬಳಿ ಧಾರವಾಡ ಮೊದಲಾದ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿರುದ್ಧ ನಿರಂತರ ದಾಳಿ ನಡೆಯುತ್ತಲೇ ಇದೆ.
ಬಿಲಿಯನ್ ಡಾಲರ್ಗಳಲ್ಲಿ ವ್ಯವಹಾರ: ಡ್ರಗ್ಸ್ ಮಾಫಿಯಾಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಿದೆ. ಬಿಲಿಯನ್ ಡಾಲರ್ಗಳಲ್ಲಿ ಇದರ ವ್ಯವಹಾರ ನಡೆಯುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರೊಂದಿಗೆ “ಡ್ರಗ್ಸ್ ಅಗೆನೆಸ್ಟ್ ವಾರ್’ ವಿಶೇಷ ಅಂದೋಲನ ನಡೆಸಲಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಅವರ ಪಾಲಕ, ಪೋಷಕರು, ಶಿಕ್ಷಕ, ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜತೆಯಾಗಿ ದೊಡ್ಡಮಟ್ಟದ ಜಾಗೃತಿ ಅಭಿಯಾನ ನಡೆಸಲಿವೆ. ಈ ಅಭಿಯಾನಯನ್ನು ಕೇವಲ ಶಾಲಾ, ಕಾಲೇಜುಗಳಿಗೆ ಮಾತ್ರ ಸೀಮಿತ ಮಾಡದೆ, ಸಾರ್ವಜನಿಕರಿಗೂ ಅರಿವು ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದರು.
“ಉದಯವಾಣಿ’ ನಿಷ್ಪಕ್ಷಪಾತ ಪತ್ರಿಕೆ: “ಉದಯವಾಣಿ’ ಪತ್ರಿಕೆ ನಿಷ್ಪಕ್ಷಪಾತ ವರದಿ ಮಾಡುವಲ್ಲಿ ಮುಂಚೂಣಿ ಯಲ್ಲಿದ್ದು, ಉತ್ತಮ ವಿಮರ್ಶೆ ಹಾಗೂ ವಿಶ್ಲೇಷಣೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು. “ಉದಯವಾಣಿ’ ಉತ್ತಮ ವಾದ ಸುದ್ದಿಯ ವಿಶ್ಲೇಷಣೆ ನೀಡುತ್ತದೆ ಹಾಗೂ ಸತ್ಯವಾದ ಸುದ್ದಿಗಳನ್ನು ವರದಿ ಮಾಡುತ್ತದೆ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಈ ಪತ್ರಿಕೆಯನ್ನು ಓದುತ್ತೇನೆ.
ಈ ಪತ್ರಿಕೆ ಸುದ್ದಿಯನ್ನು ವೈಭವೀಕರಿಸದೆ, ಜನರಿಗೆ ತಲುಪಿಸ ಬೇಕಾದ ಮಾಹಿತಿಯನ್ನು ಸರಳ ರೀತಿ ಯಲ್ಲಿ ತಲುಪಿಸುವ ಕೆಲಸ ಮಾಡುತ್ತಿ ರುವುದರಿಂದ ಈ ಪತ್ರಿಕೆ ಓದುವ ಜನರು ಆತಂಕಕ್ಕೆ ಒಳಗಾಗುವುದಿಲ್ಲ. “ಉದಯವಾಣಿ’ ಸತ್ಯ ಸುದ್ದಿಗೆ ಮಹತ್ವ ನೀಡುವುದರಿಂದ ಓದುಗರಿಗೆ ಪತ್ರಿಕೆ ಹೆಚ್ಚು ಆಪ್ತವಾಗುತ್ತದೆ. ಈ ಪತ್ರಿಕೆ ಪ್ರಸಾ ರದ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಇನ್ನಷ್ಟು ಜನರನ್ನು ತಲುಪಬೇಕು ಎಂದು ಬೊಮ್ಮಾಯಿ ಆಶಿಸಿದರು.
ಎನ್ಆರ್ಸಿ ಕುರಿತು ಕೇಂದ್ರಕ್ಕೆ ಮಾಹಿತಿ: ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮಾಡಿಸುವ ಬಗ್ಗೆ ರಾಜ್ಯ ಸರ್ಕಾರದಲ್ಲಿ ಗೊಂದಲವಿಲ್ಲ. ರಾಜ್ಯದ ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳು ಹೆಚ್ಚಾಗಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅದನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲದೆ, ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ, ಡಿಟೆನ್ಶನ್ ಕೇಂದ್ರದಲ್ಲಿ ಇಡಲಾಗುವುದು. ನಂತರ, ರಾಯಭಾರಿ ಕಚೇರಿ ಮೂಲಕ ಅವರ ಮಾತೃ ದೇಶಗಳಿಗೆ ವಾಪಸ್ ಕಳುಹಿಸುವ ಕೆಲಸ ಮಾಡಲಾಗುವುದು. 15 ದಿನದಲ್ಲಿ ನೆಲಮಂಗಲ ಬಳಿ ಡಿಟೆನ್ಷನ್ ಸೆಂಟರ್ ಆರಂಭವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳ ವಿರುದ್ಧ ಕ್ರಮ: ವಿದ್ಯಾಭ್ಯಾಸದ ಹೆಸರಿನಲ್ಲಿ ರಾಜ್ಯಕ್ಕೆ ಆಗಮಿಸಿ, ವೀಸಾ ಅವಧಿ ಮುಗಿದರೂ ಇಲ್ಲಿಯೇ ಉಳಿದುಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವಿದೇಶಿ ಪ್ರಜೆಗಳನ್ನು ಅವರ ದೇಶದ ರಾಯಭಾರಿ ಕಚೇರಿಗಳ ಮೂಲಕ ಅವರ ಮಾತೃ ದೇಶಗಳಿಗೆ ಕಳುಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ, ವಿದೇಶಗಳೊಂದಿಗೆ ಹೊಂದಿಕೊಂಡ ಗಡಿ ರಾಜ್ಯವಾಗದಿದ್ದರೂ ಬಾಂಗ್ಲಾ ಪ್ರಜೆಗಳು ಪಶ್ಚಿಮ ಬಂಗಾಳದ ಮೂಲಕ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಅಲ್ಲದೇ, ನಗರ ಪ್ರದೇಶಗಳಲ್ಲಿ ಶೈಕ್ಷಣಿಕ ಅವಧಿಯ ವೀಸಾ ಮುಗಿದರೂ ವಿವಿಧ ಕೋರ್ಸ್ಗಳ ಹೆಸರಿನಲ್ಲಿ ವೀಸಾ ಅವಧಿ ವಿಸ್ತರಿಸುವುದು, ಇಲ್ಲಿಯೇ ಉಳಿದುಕೊಳ್ಳಲು ಕಾನೂನು ಬಾಹಿರ ಚಟುವಟಿಕೆ ನಡೆಸಿ, ಜಾಮೀನು ಪಡೆದು ಕಾನೂನು ಹೋರಾಟದ ನೆಪದಲ್ಲಿ ಇಲ್ಲಿಯೇ ಉಳಿದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸುವ ಬದಲು ರಾಯಭಾರಿ ಕಚೇರಿಗಳ ಮೂಲಕ ಅವರ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆ ಸಮಗ್ರ ಅಭಿವೃದ್ಧಿ: ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧವಾಗುತ್ತಿದೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ಅಭಿವೃದ್ಧಿಯನ್ನು ಮೂಲವಾಗಿಟ್ಟುಕೊಂಡು ಹಲವು ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಸಿಆರ್ಝಡ್ ವ್ಯಾಪ್ತಿಯನ್ನು 50 ಮೀಟರ್ಗೆ ವಿಸ್ತರಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈಗಾಗಲೇ ಒಂದು ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ದೇವಾಲಯಗಳು ಹೆಚ್ಚಿರುವುದರಿಂದ “ಟೆಂಪಲ್ ಟ್ಯೂರಿಸಂ’ ಅಭಿವೃದ್ಧಿಗೂ ಅವಕಾಶ ಇದೆ.
ಹಾಗೆಯೇ, ಆರೋಗ್ಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಬೇಕಾದ ಎಲ್ಲ ರೀತಿಯ ಅವಕಾಶ ಇದೆ. ಹೀಗಾಗಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯನ್ನು ಪರಿಸರ ಸ್ನೇಹಿ ಕೈಗಾರಿಕಾ ಹಬ್ ಆಗಿ ಬೆಳೆಸಲಾಗುವುದು. ಈ ಹಿನ್ನೆಲೆಯಲ್ಲಿ ವಿವಿಧ ಕೈಗಾರಿಕೆಗಳು, ಫಿಶ್ಮಿಲ್ ಸಹಿತವಾಗಿ ಕರಾವಳಿ ಪ್ರದೇಶಕ್ಕೆ ಹೊಂದಿಕೊಳ್ಳಬಲ್ಲ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ವಿವಿಧ ಆಯಾಮಗಳಲ್ಲಿ ಸ್ಥಾಪಿಸಲು ತೀರ್ಮಾನ ನಡೆಸಿದ್ದೇವೆ ಎಂದು ವಿವರ ನೀಡಿದರು.
ನಕ್ಸಲ್ ತ್ರಿರಾಜ್ಯ ಚಟುವಟಿಕೆಗೆ ತಡೆ: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಿದ್ದೂ, ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರಂತರ ಕೂಂಬಿಂಗ್ ಕಾರ್ಯಚರಣೆ ಹಾಗೂ ಇನ್ನಿತರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದರು. ನಕ್ಸಲ್ ಚಟುವಟಿಕೆಗಳು ಪ್ರಮುಖವಾಗಿ ಕರ್ನಾಟಕದ ಕರಾವಳಿ, ಮಲೆನಾಡು, ಗಡಿ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ವ್ಯಾಪ್ತಿಯಲ್ಲಿ ಕೇಂದ್ರೀಕೃತಗೊಂಡಿದೆ.
ನೆರೆ ರಾಜ್ಯಗಳ ಸಹಯೋಗದಲ್ಲಿ ಮಾಹಿತಿ ವಿನಿಮಯ ಮತ್ತು ಕೂಂಬಿಂಗ್ ಕಾರ್ಯಚರಣೆ ನಡೆಸಲಾಗುತ್ತಿದೆ. ರಾಜ್ಯದ ಗಡಿ ಪ್ರದೇಶದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಬೇರೆ ರಾಜ್ಯಗಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಹೀಗಾಗಿ, ರಾಜ್ಯದಲ್ಲಿ ನಕ್ಸಲ್ಗೆ ಸಂಬಂಧಿಸಿದಂತೆ ಯಾವುದೇ ಆತಂಕವಿಲ್ಲ. ತಮಿಳುನಾಡಿನ ನಕ್ಸಲರು ಕರ್ನಾಟಕದಲ್ಲಿ, ಕರ್ನಾಟಕದ ನಕ್ಸಲರು ತಮಿಳನಾಡು ಅಥವಾ ಕೇರಳಕ್ಕೆ ಹೋಗುತ್ತಿರುತ್ತಾರೆ. ಈ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ ಎಂದರು.
ಚಿಕ್ಕಮಗಳೂರಿನವರು!: ಇತ್ತೀಚೆಗೆ ಕೇರಳದಲ್ಲಿ ನಡೆದ ಪೊಲೀಸ್ ಕಾರ್ಯಚರಣೆ ಯಲ್ಲಿ ಕರ್ನಾಟಕದ ಇಬ್ಬರು ನಕ್ಸಲರು ಸತ್ತಿರುವುದು ವಿವಿಧ ಮೂಲಗಳಿಂದ ದೃಢಪಟ್ಟಿದೆ. ಅವರು ಕರ್ನಾಟಕದವರೇ ಎನ್ನುವುದಕ್ಕೆ ಹಲವು ದಾಖಲೆಗಳು ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಕರಾವಳಿ ಕಾವಲು ಪಡೆಗೆ ಬಲ: ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಕರಾವಳಿ ಕಾವಲು ಪಡೆಗೆ ಇನ್ನಷ್ಟು ಬಲ ತುಂಬಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್ ಪಡೆಗೆ ಅಗತ್ಯ ಮೂಲಸೌಕರ್ಯಗಳಾದ ಆಧುನಿಕ ಬೋಟು, ಅಗತ್ಯ ಶಸ್ತ್ರಾಸ್ತ್ರ ಹಾಗೂ ಇತರ ಸೌಲಭ್ಯ ನೀಡಲು 20 ಕೋಟಿ ರೂ.ಸಚಿವ ಸಂಪುಟದಿಂದ ಮಂಜೂರಾಗಿದೆ. ಕರಾವಳಿ ಪೊಲೀಸ್ ಪಡೆಯ ಗಸ್ತನ್ನು ಇನ್ನಷ್ಟು ಬಲಪಡಿಸಲಿದ್ದೇವೆ.
ಆಳ ಸಮುದ್ರದಲ್ಲಿ 12 ನಾಟಿಕಲ್ ಮೈಲಿಗಿಂತ ಆಚೇಗೆ ಭಾರತೀಯ ನೌಕಪಡೆಯ ಭದ್ರತೆ ಇರುತ್ತದೆ. 12 ನಾಟಿಕಲ್ ಮೈಲಿನಿಂದ ಒಳಗೆ ರಾಜ್ಯದ ಭದ್ರತಾ ವ್ಯವಸ್ಥೆ ಇರುತ್ತದೆ. ಕರಾವಳಿ ತೀರ ಪ್ರದೇಶದಲ್ಲಿ ಕರಾವಳಿ ಕಾವಲು ಪಡೆಗಳು ಭದ್ರತಾ ಕಾರ್ಯ ನಡೆಸುತ್ತಿವೆ. ಇಡೀ ವಿಶ್ವದಲ್ಲೇ ಕರಾವಳಿ ಪ್ರದೇಶ ಭಯೋತ್ಪಾದಕರಿಗೆ ಅನುಕೂಲಕರ ಪ್ರದೇಶ ಎಂಬಂತಾಗಿದೆ. ದೊಡ್ಡ ಬಂದರುಗಳಿಗಿಂತ ಹೆಚ್ಚಾಗಿ ಕಿರು ಬಂದರು ಮತ್ತು ಕರಾವಳಿಯ ಇತರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 12 ಹೈ-ಡೆನ್ಸಿಟಿ ಕಾರಿಡಾರ್ – ಸಚಿವ ಬೊಮ್ಮಾಯಿ: ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಬೆಂಗಳೂರಿನಲ್ಲಿ 12 ಹೈ-ಡೆನ್ಸಿಟಿ ಕಾರಿಡಾರ್ಗಳನ್ನು ಗುರುತಿಸಲಾಗಿದ್ದು, ಅವುಗಳ ಅಧ್ಯಯನ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ಅಗತ್ಯವಿರುವ ಸ್ವಯಂ ಚಾಲಿತ ಸಿಗ್ನಲ್ ಸೇರಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು. ಈ ಮಾರ್ಗದಲ್ಲಿರುವ ಶಾಲಾ- ಕಾಲೇಜುಗಳಿಗೆ ಸಂಚಾರದ ಬಗ್ಗೆ ಕೆಲವೊಂದು ನಿರ್ದೇಶನ ನೀಡ ಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು