ಕೆಪಿಎಲ್ ಫಿಕ್ಸಿಂಗ್: ಗೋವಾ ತಂಡದಿಂದ ಹೊರಬಿದ್ದ ಸಿಎಂ ಗೌತಮ್
Team Udayavani, Nov 7, 2019, 5:14 PM IST
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸಿ ಎಂ ಗೌತಮ್ ಅವರೊಂದಿಗಿನ ಗುತ್ತಿಗೆಯನ್ನು ಗೋವಾ ಕ್ರಿಕೆಟ್ ಮಂಡಳಿ ರದ್ದು ಮಾಡಿದೆ.
ಈ ವರ್ಷದ ಕೆಪಿಎಲ್ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಲು ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ ಎಂ ಗೌತಮ್ ಮತ್ತು ಸಹ ಆಟಗಾರ ಅಬ್ರಾರ್ ಖಾಜಿ ಬುಕ್ಕಿಗಳೊಡನೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ತನಿಖೆಯಿಂದ ಬಯಲಾಗಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ ಇಬ್ಬರು ಆಟಗಾರರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಸಿ ಎಂ ಗೌತಮ್ ಅವರು ಸದ್ಯ ಗೋವಾ ತಂಡದ ಪರವಾಗಿ ಆಡುತ್ತಿದ್ದಾರೆ. ಶುಕ್ರವಾರದಿಂದ ಆರಂಭವಾಗಲಿರುವ ಸೈಯದ್ ಮುಶ್ತಾಕ್ ಆಲಿ ಕೂಟಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಸದ್ಯ ಗೋವಾ ಕ್ರಿಕೆಟ್ ಅಸೋಸಿಯೇಶನ್ ದರ್ಶನ್ ಮಿಶೆಲ್ ಅವರನ್ನು ಹೊಸ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.