ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ
ಕೆಆರ್ಐಡಿಎಲ್ ಇಇ ಪರ ಆಗಮಿಸಿದ ಸಹಾಯಕ ಇಂಜಿನಿಯರ್ಗೆ ಅಧ್ಯಕ್ಷೆ ತರಾಟೆ ಅಂಗನವಾಡಿಗಳಲ್ಲಿ ಸಿಸಿ ಕ್ಯಾಮೆರಾ ಹಾಕಿ
Team Udayavani, Nov 13, 2019, 3:22 PM IST
ರಾಯಚೂರು: ಸಭೆಗೆ ಹಾಜರಾಗದೆ ಬದಲಿ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಕಳುಹಿಸಿದ ಏಳು ಜನ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೇಷ್ಮೆ ಇಲಾಖೆ, ಕೆಆರ್ಐಡಿಎಲ್, ವಯಸ್ಕರ ಶಿಕ್ಷಣ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಸೇರಿ ವಿವಿಧ ಇಲಾಖೆ ಅ ಧಿಕಾರಿಗಳು ಸಭೆಗೆ ಬಂದಿಲ್ಲ. ಅನುಮತಿ ಪಡೆಯದೆ, ಮನಸೋ ಇಚ್ಛೆ ಗೈರಾದರೆ ಇಲ್ಲಿ ನಾವೇಕೆ ಇರಬೇಕು. ಸಭೆಗೆ ಬೇಕಾದ ಮಾಹಿತಿಯನ್ನು ಯಾರು ನೀಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೆಆರ್ಐಡಿಎಲ್ ಇಇ ಪರ ಆಗಮಿಸಿದ ಸಹಾಯಕ ಇಂಜಿನಿಯರ್ ರಾಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷೆ, ಮಾಹಿತಿ ಇಲ್ಲದಿದ್ದರೆ ಸಭೆಗೆ ನೀವು ಬರಬೇಡಿ. ಹೊರಟು ಹೋಗಿ ಎಂದು ಸಿಡಿಮಿಡಿಗೊಂಡರು.
ಜೆಸ್ಕಾಂನಿಂದ ಸಿಂಧನೂರಿನಲ್ಲಿ ಲೈನ್ ಕಾಮಗಾರಿ ಮುಗಿದಿದ್ದು, ಟ್ರಾನ್ಸ್ಫಾರ್ಮರ್ ಅಳವಡಿಸಬೇಕಿದೆ. ತೊಗರಿ ಬೆಳೆಗಾರರಿಂದ ಆಕ್ಷೇಪ ವ್ಯಕ್ತವಾದ ಕಾರಣ ವಿಳಂಬವಾಯಿತು, ವಾರದೊಳಗೆ ಕೆಲಸ ಮುಗಿಸುವುದಾಗಿ ಇಇ ಸಭೆಗೆ ಮಾಹಿತಿ ನೀಡಿದರು. ಗೋರೆಬಾಳ ಗ್ರಾಮದ ರಸ್ತೆ ಬದಿ ಟ್ರಾನ್ಸ್ಫಾರ್ಮರ್ ಅಳವಡಿಸಿದ್ದು, ಅಪಾಯ ಎದುರಾಗುವ ಸಾಧ್ಯತೆಯಿದ್ದು, ಸ್ಥಳಾಂತರಿಸುವಂತೆ ಅಧ್ಯಕ್ಷೆ ಸೂಚಿಸಿದರು.
ಕ್ಯಾಶ್ಯುಟೆಕ್ನಿಂದ ಅಂಗನವಾಡಿಗಳ ಶೌಚಗೃಹ ನಿರ್ಮಾಣಕ್ಕೆ ಸಂಬಂ ಧಿಸಿದಂತೆ ನಡೆದ ಚರ್ಚೆಯಲ್ಲಿ 374 ಶೌಚಗೃಹ ನಿರ್ಮಾಣವನ್ನು ನಿರ್ಮಿತಿ ಕೇಂದ್ರದಿಂದ ಹಿಂಪಡೆದು ಸಂಬಂಧಿಸಿದ ಪಂಚಾಯಿತಿಗೆ ನೀಡಲಾಗಿದೆ. ಶೌಚಗೃಹ ನಿರ್ಮಾಣದ 11 ಸಾವಿರ ರೂ. ಹೆಚ್ಚುವರಿ ಹಣ ವಿನಿಯೋಗಿಸಿ ಪಂಚಾಯಿತಿಯವರೇ ಶೌಚಗೃಹ ನಿರ್ಮಿಸುವರು ಎಂದು ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ನಿರ್ಮಿತಿ ಕೇಂದ್ರದಿಂದ 11 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅವುಗಳಲ್ಲಿ ಒಂದು ಮುಗಿದಿದೆ. ಉಳಿದವು ಪ್ರಗತಿಯಲ್ಲಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡಿದರೆ ಬೇಗ ಮುಗಿಸುವುದಾಗಿ ಅ ಧಿಕಾರಿ ಶರಣಬಸಪ್ಪ ಪಟ್ಟೇದ ತಿಳಿಸಿದರು.
ಮಕ್ಕಳಿಗೆ ವಿತರಿಸುವ ಶೂ ಹಾಗೂ ಸಾಕ್ಸ್ ಕಳಪೆಯಾಗಿದ್ದು, ಈ ಬಗ್ಗೆ ಸಂಬಂ ಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಸಿಇಒ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಈ ಬಗ್ಗೆ ಹಲವು ದಿನಪತ್ರಿಕೆಗಳಲ್ಲಿ ವರದಿಯಾಗಿದ್ದು, ಅವುಗಳ ಸತ್ಯಾಸತ್ಯತೆ ಪರಿಶೀಲಿಸಲು ಎಲ್ಲ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಪ್ರೊಬೇಷ್ನರಿ ಐಎಎಸ್ ಅಧಿಕಾರಿ ನೇತೃತ್ವ ವಹಿಸಿದ್ದು, ವಾರದೊಳಗೆ ವರದಿ ನೀಡುವರು ಎಂದು ತಿಳಿಸಿದರು.
ರೈತರಿಗೆ ನಕಲಿ ಕೀಟನಾಶಕ ವಿತರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ದಾಸ್ತಾನು ಮಳಿಗೆಗಳಲ್ಲಿ ಪರಿಶೀಲಿಸಿ ನಕಲಿ ಕೀಟನಾಶಕ ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಕೃಷಿ ಇಲಾಖೆ ಅ ಧಿಕಾರಿ ಸಭೆಗೆ ತಿಳಿಸಿದರು. ಇಲಾಖೆಯಿಂದ ರೈತರಿಗೆ ಕೀಟನಾಶಕ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷೆ ಸೂಚಿಸಿದರು.
ಜಿಪಂ ಯೋಜನಾ ಧಿಕಾರಿ ಡಾ| ರೋಣಿ ಮಾತನಾಡಿ, ಸಿಂಧನೂರಿನ ಅಂಗನವಾಡಿ ಕೇಂದ್ರಗಳಿಗೆ ಸಿಡಿಪಿಒಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಲು ಸೂಚನೆ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 112 ಅಂಗನವಾಡಿ ಕಟ್ಟಡ ಕಾಮಗಾರಿ ಕೈಗೊಂಡಿದ್ದು, 62 ಮುಗಿದಿವೆ ಎಂದು ವೀರನಗೌಡ ತಿಳಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೇ ಇಲ್ಲದಿದ್ದರೂ ಹಾಜರಾತಿ ತೋರಿಸುತ್ತಿದ್ದಾರೆ. ಇದರಿಂದ ಆಹಾರ ಪೂರೈಕೆ ಕೊರತೆಯಾಗುತ್ತಿದೆ. ಆದಕಾರಣ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡರಿಗೆ ಸೂಚಿಸಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿ ನೀಡುವುದಿಲ್ಲ. ಹೀಗೆ ಮುಂದುವರಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.