ಸರೋಜಿನಿ ಮಹಿಷಿ ವರದಿ ಜಾರಿಗೆ ಶ್ರಮಿಸುವೆ
Team Udayavani, Nov 14, 2019, 3:08 AM IST
ಬೆಂಗಳೂರು: ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ 2018ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಹಿನ್ನೆಲೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಜಾರಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ನಾಡಿನ ನೆಲ-ಜಲ, ಭಾಷೆಯ ಉಳಿವಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಕನ್ನಡ ಭಾಷೆಯ ಉಳಿವು ಕೇವಲ ಸರ್ಕಾರದ ಕೆಲಸವಲ್ಲ. ಈ ನಾಡಿನ ಜನರ ಕರ್ತವ್ಯವಾಗಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು. ಜ್ಞಾನಕ್ಕಾಗಿ ಇಂಗ್ಲಿಷ್ ಕಲಿಕೆ ಅಗತ್ಯ. ಜತೆಗೆ, ಕನ್ನಡ ಭಾಷೆಯ ಉಳಿವೂ ಸಹ ಅಷ್ಟೇ ಅಗತ್ಯ. ಈ ದೃಷ್ಟಿಯಿಂದ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಕನ್ನಡದಲ್ಲೇ ಮಕ್ಕಳೊಂದಿಗೆ ಮಾತನಾಡಿ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿದರು.
ಪ್ರಧಾನಿಗೆ ಪತ್ರ ಬರೆಯಲು ಒತ್ತಾಯ: ಬಸವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕನ್ನಡಿಗರ ಹಿತ ಕಾಯಬೇಕು ಎಂದು ಹೇಳಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಎಸ್.ಆರ್.ಹಿರೇಮಠ, ದು.ಸರಸ್ವತಿ ಗೈರಾಗಿದ್ದರು.
ಸಿ.ಟಿ.ರವಿ ಸ್ಪಷ್ಟನೆ: ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಸಿ.ಟಿ.ರವಿ, “ಸತ್ಯ ಹೇಳಿದರೆ ಅದು ವಿವಾದವಾಗುತ್ತದೆ. ಆದರೂ ಮತ್ತೆ ಹೇಳುತ್ತೇನೆ. ಈ ಹಿಂದೆ ನಾನು ಜಾತಿ, ಮತ ಮತ್ತು ಪಂಥದ ಹೆಸರಲ್ಲಿ ಒಡೆದಾಳುವವರಿಗೆ “ಮನೆಹಾಳ್ರು’ ಎಂದಿದ್ದೆ. ಇದರಲ್ಲಿ ನನ್ನದೇನು ತಪ್ಪಿದೆ. ಇದನ್ನು ಕೆಲವರು ತಮಗೆ ಹೇಳಿದ್ದಾರೆ ಎಂದುಕೊಂಡು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು,’ ಎಂದು ಹೇಳಿದರು. ಪ್ರತಿಭಟಿಸುವುದಕ್ಕೂ ಅವರಿಗೆ ಹಕ್ಕಿದೆ. ನಾನು ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಹೇಳಿಲ್ಲ . ಜಾತಿ, ಧರ್ಮದ ಹೆಸರಿನಲ್ಲಿ ಒಡೆದಾಳುವವರು ಮನೆಹಾಳ್ರು ಅಷ್ಟೇ ಅಲ್ಲ. ದೇಶವನ್ನು ಹಾಳು ಮಾಡುವರು ಕೂಡ ಹೌದು ಎಂದರು.
ಹೇಳಿಕೆ ನೀಡುವಾಗ ತೂಕದ ಪದ ಬಳಸಿ: “ಮನೆ ಹಾಳ್ರು’ ಹೇಳಿಕೆ ವಿಚಾರವಾಗಿ ಸಚಿವ ಸಿ.ಟಿ.ರವಿ ಅವರಿಗೆ ಮುಖ್ಯಮಂತ್ರಿಗಳ ಎದುರೆ ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ತರಾಟೆ ತೆಗೆದುಕೊಂಡರು. ನೀವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿದ್ದೀರಿ. ಹೇಳಿಕೆ ನೀಡುವಾಗ ತೂಕದ ಪದಗಳನ್ನು ಬಳಕೆ ಮಾಡಿರಿ ಎಂದು ಸಲಹೆ ನೀಡಿದರು. ಕನ್ನಡ ಓದಿಕೊಂಡಿದ್ದೀರಿ, ಸಂಸ್ಕೃತಿ ತಿಳಿದುಕೊಂಡಿದ್ದೀರಿ, ಕನ್ನಡದ ಪದದ ಬಗ್ಗೆ ಜ್ಞಾನವಿದೆ. ಹೀಗಾಗಿ, ಕೆಟ್ಟ ಪದಗಳನ್ನು ಬಳಕೆ ಮಾಡದಿರಿ ಎಂದು ಮನವಿ ಮಾಡಿದರು.
ಪ್ರಶಸ್ತಿ ಪಡೆದ ಸಾಧಕರು: ಎಚ್.ಎಸ್.ದೊರೆಸ್ವಾಮಿ (ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ), ಚನ್ನಮ್ಮ ಹಳ್ಳಿಕೇರಿ ( ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ), ಟಿ.ಎನ್.ಕೃಷ್ಣನ್ ( ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ), ಬಿ.ಎಸ್. ಮಠ (ನಿಜಗುಣ ಪುರಂದರ ಪ್ರಶಸ್ತಿ), ಪ್ರಕಾಶ ಕಡಪಟ್ಟಿ ( ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ), ಸಿ.ಚಂದ್ರಶೇಖರ (ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ), ಚಂದ್ರಶಾ ತಮ್ಮಣ್ಣಪ್ಪ ಮಾಳಗೆ ಮತ್ತು ಹಿನಕಲ್ ಮಹದೇವಯ್ಯ ( ಜಾನಪದಶ್ರೀ ಪ್ರಶಸ್ತಿ), ಭಾನುಮತಿ (ಶಾಂತಲಾ ನಾಟ್ಯ ಪ್ರಶಸ್ತಿ), ಲಕ್ಷಿನಾರಾಯಣ ಆಚಾರ್ಯ ಕೋಟೇಶ್ವರ (ಜಕಣಾಚಾರಿ ಪ್ರಶಸ್ತಿ), ಹುಸೇನ್ ಸಾಬ್( ಸಂತ ಶಿಶುನಾಳ ಪ್ರಶಸ್ತಿ),ರೇವಣಸಿದ್ದ ಶಾಸ್ತ್ರೀ ( ಕುಮಾರ ವ್ಯಾಸ ಪ್ರಶಸ್ತಿ), ಪ್ರೊ.ಷ.ಶೆಟ್ಟರ್ (ಪಂಪ ಪ್ರಶಸ್ತಿ), ಪ್ರೊ.ಕೆ.ಜಿ.ಕುಂದಾಣಗಾರ (ಗಡಿನಾಡ ಸಾಹಿತ್ಯ ಪ್ರಶಸ್ತಿ), ಬಿ.ಗಂಗಾಧರಮೂರ್ತಿ, ಎಚ್.ಎಂ.ಬೀಳಗಿ (ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ) ಎಸ್.ಆರ್. ಹಿರೇಮಠ (ಸಂಗೊಳ್ಳಿ ರಾಯಣ್ಣ ಪ್ರಶಸ್ತಿ) ಮತ್ತು ದು.ಸರಸ್ವತಿ (ಅಕ್ಕಮಹಾದೇವಿ ಪ್ರಶಸ್ತಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ