ಶತಮಾನೋತ್ಸವದ ಸಂಭ್ರಮದಲ್ಲಿ ಕಾಪು ಕಡಲ ತಡಿಯ ಪ್ರಥಮ ಶಾಲೆ
ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
Team Udayavani, Nov 22, 2019, 5:15 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಕಾಪು: ಕಡಲ ತಡಿಯ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಸದುದ್ದೇಶದೊಂದಿಗೆ ಪೊಲಿಪು ಮೊಗವೀರ ಮಹಾಸಭಾದ ಉತ್ಸಾಹಿ ಮುಂದಾಳುಗಳು ಒಟ್ಟುಗೂಡಿ 1918ರಲ್ಲಿ ಹುಲ್ಲು ಛಾವಣಿಯ ಮಾಡಿನಡಿಯಲ್ಲಿ ಪ್ರಾರಂಭಿಸಿದ ಪೊಲಿಪು ಫಿಷರೀಸ್ ಶಾಲೆ ನೂರರ ಸಂಭ್ರಮದಲ್ಲಿದೆ.
ಕಾಪು ಕಡಲ ತಡಿಯಡಿಯಲ್ಲಿ ಪ್ರಾರಂಭಗೊಂಡ ಪೊಲಿಪು ಫಿಷರೀಶ್ ಸ್ಕೂಲ್ ಪ್ರಸ್ತುತ ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿದೆ. ಪೊಲಿಪು ಕರಾವಳಿಯ ಮೀನು ಸಂಸ್ಕರಣಾ ಹುಲ್ಲು ಛಾವಣಿಯ ಮಾಡಿನಡಿಯಲ್ಲಿ ಮರಳಿನ ಮೇಲೆ ಸಾವಿರಾರು ಮಂದಿಗೆ ಅಕ್ಷರಾಭ್ಯಾಸವನ್ನು ನೀಡಿದ ಶಾಲೆ ಪ್ರಾರಂಭದ 2-3 ದಶಕಗಳವರೆಗೂ ಅದೇ ಹಳೇ ಮಾದರಿಯ ವ್ಯವಸ್ಥೆಗೆ ಅಂಟಿಕೊಂಡಿತ್ತು. ಬಳಿಕ ಹಂತ ಹಂತವಾಗಿ ಮೇಲ್ದರ್ಜೆಗೇರುತ್ತಾ ಬಂದ ಶಾಲೆಯು ಪ್ರಸ್ತುತ ಸುಸಜ್ಜಿತ ಶಾಲೆಯಾಗಿ ಬೆಳೆದು ನಿಂತಿದೆ. ಕಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಗಿದ್ದ ಪೊಲಿಪು ಫಿಷರೀಸ್ ಸ್ಕೂಲ್ 1949ರಲ್ಲಿ ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಬಳಿಕ 1957ರಲ್ಲಿ ಮಿಡ್ಲ್ ಸ್ಕೂಲ್ ಆಗಿ ಪರಿವರ್ತನೆಗೊಂಡು, ನಂತರ ಪ್ರೌಢಶಾಲೆಯಾಗಿ, ಪ್ರಸ್ತುತ ಪದವಿ ಪೂರ್ವ ಕಾಲೇಜಿನ ವ್ಯವಸ್ಥೆಯೊಂದಿಗೆ ಮುನ್ನಡೆಯುತ್ತಿದೆ. 1918ರಲ್ಲಿ ಪ್ರಾರಂಭಗೊಂಡ ಈ ಶಾಲೆಯು 2019ರಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಿದೆ.
ಪಬ್ಲಿಕ್ ಸ್ಕೂಲ್ ಪ್ರಾರಂಭಿಸುವ ಭರವಸೆ
ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಇಳಿದಾಗ, ಒಂದನೇ ತರಗತಿಗೆ ಮಕ್ಕಳ ದಾಖಲಾತಿಯೇ ಆಗದ ಸಂದರ್ಭ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಮುಂದಾದ ಊರಿನವರು ಗೌರವ ಶಿಕ್ಷಕಿಯರನ್ನು ನೇಮಿಸಿಕೊಂಡು ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದಾರೆ. ಈ ಕಾರಣದಿಂದ ಸಂಸ್ಥೆಯ ವಿದ್ಯಾರ್ಥಿಗಳ ಸಂಖ್ಯೆ 100 ದಾಟಿದ್ದು, ಮುಂದಿನ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ನ್ನು ಪ್ರಾರಂಭಿಸುವ ಭರವಸೆಯನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸಮಿತಿಗೆ ನೀಡಿದ್ದಾರೆ.
ಶತ,ವಜ್ರ,ಸುವರ್ಣ ಸಂಭ್ರಮ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ, ಪ್ರೌಢಶಾಲೆಯ ವಜ್ರ ಮಹೋತ್ಸವ ಮತ್ತು ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯು 2019-20ರಲ್ಲಿ ಏಕ ಕಾಲದಲ್ಲಿ ನಡೆಯಲಿದೆ. ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್. ಶೆಟ್ಟಿ ಗೌರವಾಧ್ಯಕ್ಷರಾಗಿ, ಸರ್ವೋತ್ತಮ್ ಕುಂದರ್ ಅಧ್ಯಕ್ಷರಾಗಿರುವ ಶತ, ವಜ್ರ, ಸುವರ್ಣ ಸಂಭ್ರಮ ಸಮಿತಿಯು ಮಹೋತ್ಸವ ಆಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿವೆ.
ಸುಮಾರು 2.05 ಎಕ್ರೆ ಜಮೀನಿನಲ್ಲಿ ವಿಸ್ತಾರವಾಗಿ ಹಬ್ಬಿರುವ ಪ್ರಾಥಮಿಕ ಶಾಲೆಯ ಆವರಣದಲ್ಲಿ 3 ಕಟ್ಟಡಗಳಿವೆ. ಸಂಸ್ಥೆಯ ಹಳೆ ವಿದ್ಯಾರ್ಥಿ ಬಿ.ಆರ್. ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಪೊಲಿಪು ಮತ್ತು ಮುಂಬೈ ಶಾಖೆ, ಮೊಗವೀರ ಮಹಾಸಭಾ ಪೊಲಿಪು ಮತ್ತು ಮುಂಬಯಿ ಶಾಖೆ ಹಾಗೂ ಆಂಗ್ಲ ಮಾಧ್ಯಮ ವಿಭಾಗ ಉಸ್ತುವಾರಿ ಕಮಿಟಿಗಳ ಸಹಕಾರದಿಂದ ಹಲವಾರು ವ್ಯವಸ್ಥೆಗಳು ಶಾಲೆಗೆ ದೊರೆತಿವೆ.
ಹೆಮ್ಮೆಯ ಶಿಕ್ಷಕರು-ಹಳೆ ವಿದ್ಯಾರ್ಥಿಗಳು
ದೇಜು ಮಾಸ್ಟರ್ ಉಚ್ಚಿಲ ಸಂಸ್ಥೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಅವರ ನಂತರದಲ್ಲಿ ಬಂದ ಬಾವುಗುತ್ತು ಜಿನರಾಜ್ ಶೆಟ್ಟಿ ಅವರು ಮುಖ್ಯೋಪಾಧ್ಯಾಯ ರಾಗಿದ್ದಾಗ ಸಂಸ್ಥೆಯು ತನ್ನ ಸುವರ್ಣ ಮತ್ತು ವರದ ಮಹೋತ್ಸವವನ್ನು ಆಚರಿಸಿದೆ. ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿ, ಸರ್ಜನ್ ಡಾ| ಸದಾನಂದ ಶೆಟ್ಟಿ, ನಿವೃತ್ತ ಪೈಲಟ್ ಭಾಸ್ಕರ್ ಶೆಟ್ಟಿ ಸಹಿತ ನೂರಾರು ಸಾಧಕ ವಿದ್ಯಾರ್ಥಿಗಳು ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ.
ಕುಟೀರ ಮಾದರಿಯ ಶಾಲೆಯಲ್ಲಿ ಕುಳಿತು ಕಷ್ಟದ ಸಂದರ್ಭದಲ್ಲಿ ಶಿಕ್ಷಣ ಪಡೆದ ಕಾರಣ ನಾವು ಇಷ್ಟು ಎತ್ತರಕ್ಕೆ ಏರುವಂತಾಗಿದೆ. ಶಾಲೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಮೊಗವೀರ ಸಮುದಾಯದವರ ಕೊಡುಗೆ ಸ್ಮರಣೀಯವಾಗಿದ್ದು, ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ಣ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೇನೆ.
-ಡಾ| ಬಿ.ಆರ್. ಶೆಟ್ಟಿ ,
ಹಳೆ ವಿದ್ಯಾರ್ಥಿ,ಅನಿವಾಸಿ ಭಾರತೀಯ ಉದ್ಯಮಿ
ಸ್ಥಳೀಯರ ಸಹಕಾರ, ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಶಾಲೆ ಉತ್ತಮವಾಗಿ ಮುನ್ನಡೆಯುತ್ತಿದೆ. ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಲು ಪ್ರೋತ್ಸಾಹ ನೀಡಿದ್ದಾರೆ.
-ಎಚ್. ಎಸ್. ಅನಸೂಯ,
ಮುಖ್ಯೋಪಾಧ್ಯಾಯಿನಿ
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು