ಮಾಹಿತಿ ಕಲೆ ಹಾಕಿದ್ದೇವೆ,ನಿತ್ಯಾನಂದನ ಬಂಧನಕ್ಕೆ ಕಾರ್ಯತಂತ್ರ ಹೆಣೆಯಲಾಗಿದೆ;ಗುಜರಾತ್ ಪೊಲೀಸ್
Team Udayavani, Nov 22, 2019, 6:02 PM IST
ಅಹಮದಾಬಾದ್: ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಇರಿಸಿಕೊಂಡಿರುವ ಪ್ರಕರಣದ ಹಿನ್ನೆಲೆಯಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಆಶ್ರಮದ ಸ್ವಯಂಘೋಷಿತ ಸ್ವಾಮಿ ನಿತ್ಯಾನಂದ ಬಂಧನಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಸಂಪರ್ಕದಲ್ಲಿ ಇದ್ದಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ಮೂಲದ ಇಬ್ಬರು ಹೆಣ್ಣುಮಕ್ಕಳನ್ನು ಒತ್ತೆ ಇಟ್ಟುಕೊಂಡು ಪೋಷಕರಿಂದ ದೇಣಿಗೆ ವಸೂಲಿ ಮಾಡುವ ಸಂಚಿನ ಬಗ್ಗೆ ಸ್ವಾಮಿ ನಿತ್ಯಾನಂದನ ವಿರುದ್ಧ ಅಹಮದಾಬದ್ ನಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಕರ್ನಾಟಕದಲ್ಲಿಯೂ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದು, ಆತನ ವಿರುದ್ಧ ಸೂಕ್ತವಾದ ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತಿದೆ ಎಂದು ಗುರುವಾರ ಗುಜರಾತ್ ಪೊಲೀಸರು ತಿಳಿಸಿದ್ದರು. ಸ್ವಯಂಘೋಷಿತ ದೇವಮಾನವ ಎಲ್ಲಿದ್ದಾನೆ ಎಂಬ ಬಗ್ಗೆ ಗುಪ್ತಚರ ಇಲಾಖೆ ತಿಳಿದಿದೆ. ಅಲ್ಲದೇ ನಾವು ಕೂಡಾ ವಿವಿಧ ತನಿಖಾ ಸಂಸ್ಥೆಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದು ಅಹಮದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಆರ್ ವಿ ಅಸಾರಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.