ಹಿಂಗಾರು ಭತ್ತದ ಕೃಷಿಗೆ ಜಿಗಿಹುಳು ಬಾಧೆ, ಸಂಕಷ್ಟದಲ್ಲಿ ರೈತರು
ಕಾರ್ಕಳ ತಾಲೂಕಿನಾದ್ಯಂತ ಶೇ. 30ರಷ್ಟು ಪ್ರದೇಶದಲ್ಲಿ ಹಾನಿ; cಕೃಷಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
Team Udayavani, Dec 14, 2019, 4:08 AM IST
ಅಜೆಕಾರು: ಹಿಂಗಾರು ಭತ್ತದ ಬೆಳೆ ನಾಟಿ ಮಾಡಿ ಕೆಲವೇ ದಿನಗಳಲ್ಲಿ ನಾಟಿ ಮಾಡಿದ ನೇಜಿಗೆ ಜಿಗಿಹುಳು ಬಾಧೆ ಉಂಟಾಗಿದ್ದು ಭತ್ತದ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಾರ್ಕಳ ತಾಲೂಕಿನಾದ್ಯಂತ ಜಿಗಿಹುಳು ಬಾಧೆ ಕಾಣಿಸಿಕೊಂಡಿದೆ.
ನಾಟಿ ಮಾಡಿದ ತತ್ಕ್ಷಣ ಆರಂಭ
ಕಾರ್ಕಳ ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಒಟ್ಟು ಭತ್ತ ಬೆಳೆಯುವ ಪ್ರದೇಶಗಳ ಪೈಕಿ ಶೇ.30 ರಷ್ಟು ಜಿಗಿಹುಳು ಬಾಧೆಗೆ ಒಳಪಟ್ಟಿದೆ. ನೇಜಿ ಹಾಗೂ ನಾಟಿ ಮಾಡಿದ ತತ್ಕ್ಷಣ ಈ ಹುಳುಬಾಧೆ ಆರಂಭಗೊಳ್ಳುತ್ತಿದ್ದು ಒಮ್ಮೆ ಬಾಧೆ ಆರಂಭಗೊಂಡರೆ ಸಂಪೂರ್ಣ ಗದ್ದೆಗೆ ಆವರಿಸಿ ಪೈರು ಒಣಗಿದಂತೆ ಕಾಣುತ್ತದೆ.
ಇನ್ನಷ್ಟು ಹಾನಿಯ ಆತಂಕ
ಈಗಾಗಲೇ ಕಾರ್ಕಳ ತಾಲೂಕಿನ ಮರ್ಣೆ, ಕೆರ್ವಾಶೆ, ಶಿರ್ಲಾಲು, ಅಂಡಾರು, ಇನ್ನಾ, ಮುಂಡ್ಕೂರು, ನಿಟ್ಟೆ ಗ್ರಾಮಗಳ ರೈತರ ಭತ್ತದ ಪೈರು ಹುಳ ಬಾಧೆಗೆ ಹೆಚ್ಚಿನಪ್ರಮಾಣದಲ್ಲಿ ಹಾನಿ ಆಗಿದ್ದು ತಾಲೂಕಿನ ಇತರ ಗ್ರಾಮ ಗಳಲ್ಲಿಯೂ ಹುಳಬಾಧೆ ಕಂಡುಬಂದಿದ್ದು ಇನ್ನಷ್ಟು ಭತ್ತದ ಗದ್ದೆಗೆ ಹಾನಿಯಾಗುವ ಆತಂಕ ಕೃಷಿಕರದ್ದು.
ಈಗಾಗಲೇ ಹಲವರ ಭತ್ತದ ಗದ್ದೆ ಹುಳ ಬಾಧೆಯಿಂದ ಸಂಪೂರ್ಣ ನಾಶವಾಗಿದೆ. ಈ ಹಿಂದೆ ಕೃಷಿಕರು ಹುಳು, ದುಂಬಿ ದಾಳಿ ಗಳಿಂದ ಭತ್ತದ ಪೈರನ್ನು ರಕ್ಷಣೆ ಮಾಡಲು ರಾತ್ರಿ ವೇಳೆಯಲ್ಲಿ ದೀಪ ಗಳನ್ನು (ದೊಂದಿ) ಬಳಕೆ ಮಾಡುತ್ತಿದ್ದರು. ಈ ದೀಪದ ಬೆಳಕಿಗೆ ದುಂಬಿಗಳು ಆಕರ್ಷಿತವಾಗಿ ದೀಪಕ್ಕೆ ಬಿದ್ದು ನಾಶಗೊಳ್ಳುತ್ತಿ ದ್ದವು. ಆದರೆ ಜಿಗಿಹುಳುಗಳು ಪೈರಿನ ಬುಡಭಾಗದಲ್ಲಿಯೇ ಹಿಂಡಾಗಿ ಇರುವುದರಿಂದ ದೀಪಗಳ ಬಳಕೆ ನಿಷ್ಪ್ರಯೋಜಕ ವಾಗುತ್ತಿದೆ ಎಂಬುದು ಕೃಷಿಕರ ಅಳಲು.
ಅಧಿಕಾರಿಗಳಿಂದ ಪರಿಶೀಲನೆ
ಪ್ರತಿ ವರ್ಷ ಭತ್ತದ ಬೆಳೆಗೆ ಹುಳುಬಾಧೆ ಇತ್ತಾದರೂ ಕಳೆದ ಒಂದೆರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು ರೈತರು ಇದರಿಂದ ಕಂಗೆಟ್ಟಿದ್ದಾರೆ. ಈಗಾಗಲೇ ಕೃಷಿ ಇಲಾಖೆಯ ತಂಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿ ಹುಳುಬಾಧೆ ತಡೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹುಳುಬಾಧೆ ತಡೆಯುವಲ್ಲಿ ಭತ್ತದ
ಗದ್ದೆಯಲ್ಲಿನ ನೀರನ್ನು ಬಸಿದುಹೋಗು ವಂತೆ ಮಾಡಿ ತೇವಾಂಶ ಕಡಿಮೆಯಾಗಿ ಇರುವಂತೆ ಮಾಡಿ ಕೀಟನಾಶಕ ಬಳಸಿ ಸಂಪೂರ್ಣ ಹುಳು ನಾಶ ವಾಗುವವರೆಗೆ ರೈತರು ಎಚ್ಚರವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಹುಳಬಾಧೆಗೆ ಒಳಪಟ್ಟ ಭತ್ತದ ಪೈರಿಗೆ ಯೂರಿಯಾ ಬಳಸುವುದರಿಂದ ರೋಗಬಾಧೆ ಉಲ್ಬಣಗೊಳ್ಳುತ್ತಿದ್ದು ಯೂರಿಯಾ ಬಳಸದಂತೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ವಿಜ್ಞಾನಿಗಳ ತಂಡ ಭೇಟಿ
ತಾಲೂಕಿನ ವಿವಿಧ ಗ್ರಾಮಗಳಿಗೆ ಹೈದ್ರಾಬಾದ್ ಇಕ್ರಿಸ್ಯಾಟ್ ಸಂಸ್ಥೆಯ ಎ. ಎನ್. ರಾವ್ ಹಾಗೂ ಅವರ ತಂಡ ಶಿರ್ಲಾಲು ಗ್ರಾಮದ ವಿವಿಧ ಭಾಗಗಳಿಗೆ ಭೇಟಿ ನೀಡಿ ರೋಗಬಾಧಿತ ಕೃಷಿಯನ್ನು ಪರೀಕ್ಷಿಸಿದ್ದಾರೆ.
ಬಿಳಿ ಬೆನ್ನಿನ ಜಿಗಿಹುಳು ಹಾನಿಯ ಲಕ್ಷಣ
ಅಪ್ಸರೆ ಹಾಗೂ ಪ್ರೌಢಕೀಟಗಳು ನೀರಿನ ಮೇಲ್ಭಾಗ ಮತ್ತು ಭತ್ತದ ಪೈರಿನ ಬುಡಭಾಗದಲ್ಲಿ ಕುಳಿತು ಎಲೆಗಳಿಂದ ರಸ ಹೀರುವುದರಿಂದ ಭತ್ತದ ಪೈರಿನ ಬೆಳವಣಿಗೆ ಕುಂಠಿತವಾಗುವುದರೊಂದಿಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಭತ್ತದ ಹಿಳ್ಳೆ ಒಡೆಯುವ ಪ್ರಕ್ರಿಯೆ ಕುಂಠಿತವಾಗುತ್ತದೆ. ಹಾನಿ ತೀವ್ರಗೊಂಡಲ್ಲಿ ಭತ್ತದ ಪೈರು ಅನಿಯಮಿತ ಆಕಾರದಲ್ಲಿ ಅಲ್ಲಲ್ಲಿ ಸುಟ್ಟಂತೆ ಒಣಗಿ ಹೋಗುತ್ತದೆ.
ಹತೋಟಿ ಕ್ರಮ
ಬಿಳಿ ಬೆನ್ನಿನ ಜಿಗಿ ಹುಳುವಿನ ಹತೋಟಿಗಾಗಿ ರೈತರು ಭತ್ತದ ಗದ್ದೆಯಲ್ಲಿನ ನೀರನ್ನು ಬಸಿದು ತೇವಾಂಶ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಸಾರಜನಕವುಳ್ಳ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸಬಾರದು. ಕೀಟನಾಶಕಗಳಾದ ಬುಫೊಫೆಜಿನ್ 1 ಮಿ.ಲೀ/ಲೀಟರ್ ಹಾಗೂ ಥಯೋಮಿಥಾಕ್ಸಾಮ್ 0.25 ಗ್ರಾಂ/ ಲೀಟರ್ ಅಥವಾ ಕೀಟನಾಶಕಗಳಾದ ಎಸಿಪೇಟ್ 1 ಗ್ರಾಂ./ಲೀಟರ್ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲಿ/ಲೀ.ನಂತೆ ಮಿಶ್ರಣ ಮಾಡಿ 5ರಿಂದ 6 ದಿನಗಳ ಅಂತರದಲ್ಲಿ 2-3 ಬಾರಿ ಪೈರಿನ ಬುಡಭಾಗಕ್ಕೆ ತಾಗುವಂತೆ ಸಿಂಪಡಿಸಬೇಕು. ನೀರಿನಲ್ಲಿ ಒಂದು ಎಕರೆಗೆ 200 ಲೀ. ಸಿಂಪರಣಾ ದ್ರಾವಣವನ್ನು ಸಿಂಪರಣೆ ಮಾಡುವುದು. ಇದಕ್ಕೆ ಅವಶ್ಯರುವ ಅಸಿಪೇಟ್ ಹಾಗೂ ಥಯೋಮಿಥಾಕ್ಸಾಮ್ ಕೀಟನಾಶಕಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದ್ದು, ರೈತರು ಸಹಾಯಧನ ಪಡೆಯಬಹುದಾಗಿದೆ.
ರೈತರಿಗೆ ವಿಶೇಷ ಸೂಚನೆ
ರೈತರು ಹಾನಿಯಾದ ತಾಕುಗಳಲ್ಲಿ ಯೂರಿಯಾ ಹಾಗೂ ಫ್ಲೋರೆಟ್ ಬಳಸುತ್ತಿದ್ದು, ಇದರಿಂದ ಕೀಟಬಾಧೆ ಉಲ್ಬಣಗೊಳ್ಳಲಿದೆ. ಆದ್ದರಿಂದ ರೈತರು ಸದ್ರಿ ಪದ್ಧತಿಯನ್ನು ಅನುಸರಿಸದೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ನಿಗದಿತ ಕೀಟನಾಶಕ ಪಡೆದು ಸಿಂಪಡಣೆ ಕೈಗೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.
15ರಿಂದ 20 ಹೆಕ್ಟೇರ್ ಕೃಷಿಗೆ ಹುಳುಬಾಧೆ
ಭತ್ತದ ಪೈರಿಗೆ ಜಿಗಿಹುಳು ಬಾಧೆ ಕಂಡುಬಂದಿದ್ದು ಕಾರ್ಕಳ ತಾಲೂಕಿನ ಸುಮಾರು 15ರಿಂದ 20 ಹೆಕ್ಟೇರ್ ಭತ್ತದ ಪೈರು ಹುಳು ಬಾಧೆಗೆ ತುತ್ತಾಗಿದೆ. ಕೃಷಿ ಇಲಾಖೆಯಿಂದ ರೋಗ ತಡೆಯುವ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
– ಜಯಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕರು, ಕಾರ್ಕಳ
ಭತ್ತ ಬೆಳೆಯಲು ರೈತರ ಹಿಂದೇಟು
ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೆಲವು ರೈತರು ಕಷ್ಟಪಟ್ಟು ನಾಟಿ ಮಾಡಿದರೂ ಸಹ ಹುಳಬಾಧೆಯಂತಹ ರೋಗಗಳು ಬಂದು ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಂತಾಗುತ್ತದೆ. ಹುಳಬಾಧೆ ಸಂಪೂರ್ಣ ತಡೆಯುವಂತಹ ಕೀಟನಾಶಕಗಳು ರೈತರಿಗೆ ನಾಟಿ ಸಂದರ್ಭವೇ ದೊರೆತಲ್ಲಿ ಸಂಭವಿಸಬಹುದಾದ ನಷ್ಟ ತಡೆಯಬಹುದಾಗಿದೆ.
-ಗೋಪಾಲ್, ಭತ್ತ ಬೆಳೆಯುವ ರೈತ