ಟ್ಯಾಂಕರ್ ಸ್ಫೋಟ: ಇಬ್ಬರು ಬಲಿ
Team Udayavani, Dec 22, 2019, 3:05 AM IST
ವಿಜಯಪುರ: ನಗರದಲ್ಲಿ ಶನಿವಾರ ಮಧ್ಯಾಹ್ನ ವೆಲ್ಡಿಂಗ್ ಕೆಲಸ ಮಾಡುವಾಗ ಪಕ್ಕದಲ್ಲಿದ್ದ ಖಾಲಿ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋಲಗುಂಬಜ್ ಹಿಂಭಾಗದಲ್ಲಿರುವ ರೈಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡ್ಲೈನ್ಸ್ನಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಉತ್ತರಪ್ರದೇಶ ಮೂಲದ ವೀರೇಂದ್ರ ಪ್ರಜಾಪತಿ (31) ಹಾಗೂ ವಿಜಯಪುರ ನಗರ ನಿವಾಸಿ ರಾಜು ಗಿಡ್ಡೆ (36) ಎಂದು ಗುರುತಿಸಲಾಗಿದೆ. ವಿಶ್ವನಾಥ ಬಡಿಗೇರ (29), ಪ್ರಕಾಶ ಶಿರೋಳ (35) ಹಾಗೂ ಬಸವರಾಜ ಡೋಣೂರ (55) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಜಾಪತಿಯವರು ಎಥೆನಾಲ್ ಟ್ಯಾಂಕರ್ ದುರಸ್ತಿ ಮಾಡುತ್ತಿದ್ದಾಗ, ಗ್ಯಾರೇಜ್ ಮಾಲೀಕರಾದ ಸಂಗನಗೌಡ ನಾಡಗೌಡ ಅವರ ಕಾರು ಚಾಲಕ ರಾಜು ಮಾತನಾಡಿಸುತ್ತ ಕುಳಿತಿದ್ದ. ಈ ಹಂತದಲ್ಲಿ ಸ್ಫೋಟ ಸಂಭವಿಸಿ, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಹೇಗೆ ಸಂಭವಿಸಿತು ಎಂಬುದೇ ತಿಳಿಯದಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ, ಇನ್ನೋರ್ವ ಮೆಕ್ಯಾನಿಕ್ ಮೇಸ್ತ್ರಿ ಸಂತೋಷ ಚವ್ಹಾಣ “ಉದಯವಾಣಿ’ಗೆ ವಿವರಿಸಿದರು. ಸಕ್ಕರೆ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸಿದ್ದರಿಂದ ಖಾಲಿ ಟ್ಯಾಂಕರ್ನ್ನು ಕಳೆದ ನಾಲ್ಕು ತಿಂಗಳಿಂದ ಗ್ಯಾರೇಜ್ನಲ್ಲೇ ನಿಲ್ಲಿಸಲಾಗಿತ್ತು.
ಇದೀಗ ಮತ್ತೆ ಉತ್ಪಾದನೆ ಆರಂಭಿಸಿದ್ದರಿಂದ ಟ್ಯಾಂಕರ್ ದುರಸ್ತಿ ಮಾಡಲಾಗುತ್ತಿತ್ತು. ಈ ವೇಳೆ ನಿಂತಿದ್ದ ಟ್ಯಾಂಕರ್ನಲ್ಲಿ ಉಳಿದಿದ್ದ ಎಥೆನಾಲ್ನಿಂದ ಗ್ಯಾಸ್ ಸೃಷ್ಟಿಯಾಗಿ, ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿ ಹೊರ ಹೊಮ್ಮಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ಸದ್ದಿನಿಂದ ಕಂಗಾಲಾದ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದರು. ಗೋಲಗುಮ್ಮಟ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಥಳಕ್ಕೆ ಎಸ್ಪಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ
Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ